ಮಂಡ್ಯ: ಕಳೆದ ಒಂದು ವಾರದಿಂದ ನಿರಂತರವಾಗಿ ಕುರಿಗಳು ಸಾಯುತ್ತಿದ್ದು, ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿಯಾಗಿರುವ ಘಟನೆ ಮಂಡ್ಯದ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಹುತೇಕ ರೈತರು ಕುರಿ ಸಾಕುತ್ತಿದ್ದು, ಕಳೆದೊಂದು ವಾರದಲ್ಲಿ ಸುಮಾರು 25 ಕುರಿಗಳು ಸಾವನ್ನಪ್ಪಿವೆ. 500ಕ್ಕೂ ಹೆಚ್ಚು ಕುರಿಗಳು ಅನಾರೋಗ್ಯ ಪೀಡಿತವಾಗಿವೆ. ಕುರಿಗಳ ಬಾಯಲ್ಲಿ ಹುಣ್ಣಾಗಿವೆ. ಜೊಲ್ಲು ಸುರಿಸುತ್ತಾ ಮೇವು ತಿನ್ನದೇ ಸಪ್ಪಗೆ ನಿಲ್ಲುವ ಕುರಿಗಳು ಸಾವನ್ನಪ್ಪುತ್ತಿವೆ.
ವೈದ್ಯರು ಬಂದು ಚಿಕಿತ್ಸೆ ನೀಡಿದ್ರೂ ಪ್ರಯೋಜನವಾಗುತ್ತಿಲ್ಲ. ಈ ರೋಗ ಅಕ್ಕಪಕ್ಕದ ಗ್ರಾಮಕ್ಕೂ ಹರಡುವ ಭೀತಿ ಶುರುವಾಗಿದೆ. ಇಷ್ಟು ದಿನ ಮಳೆಯಿಲ್ಲದೇ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತಾಪಿ ವರ್ಗ, ಇದೀಗ ಕುರಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಆದಷ್ಟು ಬೇಗ ಪಶು ವೈದ್ಯಾಧಿಕಾರಿಗಳು ಕುರಿಗಳ ರೋಗದ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು. ಸರ್ಕಾರ ಸಾವನ್ನಪ್ಪಿರುವ ಕುರಿಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.