ಬೆಂಗಳೂರು: ಗೃಹ ಖಾತೆ ವಹಿಸಿಕೊಳ್ಳಲು ಹಿರಿಯ ಸಚಿವರು ನಿರಾಕರಿಸಿದ ಬೆನ್ನಲ್ಲೆ ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ಗೃಹ ಖಾತೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ಮಂಗಳವಾರದಂದು ರಮಾನಾಥ್ ರೈ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿರುವ ಸಿಎಂ, ಗೃಹ ಖಾತೆ ನೀಡಿದ್ರೆ ಅದನ್ನ ನಿರ್ವಹಿಸಲು ಸಿದ್ಧರಾಗಿರಿ ಅಂತಾ ಸೂಚನೆ ನೀಡಿದ್ದಾರೆ. ಕರಾವಳಿಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿ ಕಾಂಗ್ರೆಸ್ ಬಲ ಪಡಿಸಲು ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡದಲ್ಲಿ ರಮಾನಾಥ್ ರೈ ಅವರ ಕೈ ಬಲಪಡಿಸುವುದರೊಂದಿಗೆ ಕೋಮು ಗಲಭೆಗಳನ್ನ ಹತ್ತಿಕ್ಕಲು ರಮಾನಾಥ್ ರೈ ಅವರಿಗೇ ಗೃಹ ಖಾತೆ ನೀಡಿದ್ರೆ ಒಳ್ಳೆಯದು ಎಂಬ ಆಲೋಚನೆ ಸಿಎಂ ಸಿದ್ದರಾಮಯ್ಯ ಅವರದ್ದಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನ ರಮಾನಾಥ್ ರೈ ಸಮರ್ಥವಾಗಿ ಎದುರಿಸಬಲ್ಲರು. ಗೃಹ ಖಾತೆ ನೀಡಿದ್ರೆ ಕೋಮು ಗಲಭೆಗಳನ್ನ ಹತ್ತಿಕ್ಕುವಲ್ಲಿ ರಮಾನಾಥ್ ರೈ ಅವರಿಗೆ ಸಹಕಾರಿ ಆಗಲಿದೆ ಎಂಬುದು ಸಿಎಂ ಲೆಕ್ಕಾಚಾರ.
ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.