ದಾವಣಗೆರೆ: ನರ್ಸರಿ ಮೆಶ್ಗೆ ಬಿದ್ದು ಚಿರತೆಯೊಂದು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಅಳಗಿಂಚಿಕೆರೆ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ ಆಹಾರ ಹುಡುಕಿಕೊಂಡು ಗ್ರಾಮದ ಬಳಿ ಇರುವ ನರ್ಸರಿ ಹೌಸ್ಗೆ ಚಿರತೆ ಬಂದಿದ್ದು, ಮೆಶ್ನಲ್ಲಿ ಸಿಕ್ಕಿಹಾಕಿಕೊಂಡಿದೆ. ಅಲ್ಲಿದ್ದ ತಂತಿ ಕುತ್ತಿಗೆಗೆ ಸಿಕ್ಕಿಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ಹೊಲದ ಮಾಲೀಕ ನರ್ಸರಿ ಹತ್ತಿರ ಹೋಗಿ ನೋಡಿದಾಗ ಚಿರತೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯ ಹಲವಾಗಲು ಪೊಲೀಸ್ ಠಾಣೆ ಹಾಗೂ ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ಹರಪ್ಪನಹಳ್ಳಿ ತಾಲೂಕಿನ ಸುತ್ತಮುತ್ತ ಅರಣ್ಯ ಪ್ರದೇಶವಿದ್ದು ಇತ್ತೀಚೆಗೆ ಚಿರತೆ ದಾಳಿ ಹೆಚ್ಚಾಗಿದೆ. ಜೊತೆಗೆ ಜಾನುವಾರಗಳನ್ನು ಸಹ ತಿಂದು ಹಾಕುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಚಿರತೆಯ ಮೃತ ದೇಹವನ್ನು ಅರಣ್ಯ ಅಧಿಕಾರಿಗಳು ಕೊಂಡೊಯ್ದಿದ್ದಾರೆ.