ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಸಾವನ್ನಪ್ಪಿ 15 ದಿನ ಕಳೆಯುತ್ತಿದ್ದರೂ, ಆತನ ಸಾವಿನ ಸುತ್ತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸರ್ಕಾರದ ಕ್ಯಾಬಿನೆಟ್ (Cabinet) ದರ್ಜೆಯಲ್ಲಿ ಇದ್ದುಕೊಂಡು ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರ ವಿರುದ್ಧವೇ ಸಿಡಿದಿದ್ದಾರೆ. ಚಂದ್ರುವಿನ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ (FSL) ವರದಿಯನ್ನು ಎರಡೆರಡು ಬಾರಿ ತನಿಖೆ ನಡೆಸಿ ಅಂತಿಮ ವರದಿಗೆ ಇಡೀ ಪೊಲೀಸ್ ಇಲಾಖೆ ಕಾದು ಕುಳಿತಿದೆ.
ಚಂದ್ರು ಸಾವು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತ ಎಂದು ತಿಳಿದು ಬಂದಿದ್ದು, ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪವನ್ನು ಮಾಡುತ್ತಿದ್ದಾರೆ. ಅಕ್ಟೋಬರ್ 30ರ ಸಂಜೆ ಹೊನ್ನಾಳಿಯ ನಿವಾಸದಿಂದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ (Vinay Guruji) ಆಶೀರ್ವಾದ ಪಡೆದು ವಾಪಸ್ ಹೊನ್ನಾಳಿ ಕಡೆ ಹೊರಟಿದ್ದ. ಆದರೆ ಅವತ್ತೇ ನಾಪತ್ತೆಯಾಗಿದ್ದ.
ನಾಲ್ಕು ದಿನಗಳ ನಂತರ ಹೊನ್ನಾಳಿ ಬಳಿ ಇರುವ ತುಂಗಾ ನಾಲೆಯಲ್ಲಿ ಚಂದ್ರುವಿನ ಕಾರು ಹಾಗೂ ಮೃತದೇಹ ಸಿಕ್ಕಿತು. ಆತನ ಮೃತದೇಹ ಹಿಂಬದಿ ಸೀಟ್ ನಲ್ಲಿ ಇದ್ದಿದ್ದು ಹಾಗೂ ಕೆಲ ಗಾಯದ ಗುರುತು ಇದ್ದ ಹಿನ್ನಲೆ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಕೂಡ ಆಗಮಿಸಿ ಪರಿಶೀಲನೆ ನಡೆಸಿ ಇದು ಪ್ರಾಥಮಿಕ ತನಿಖೆಯಲ್ಲಿ ಅಪಘಾತವಾಗಿದೆ ಎಂದು ಮಾಹಿತಿ ನೀಡಿದ್ರು. ಡಯಾಟಮ್ ಟೆಸ್ಟ್, ಎಫ್ಎಸ್ಎಲ್ ವರದಿ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಮಾಹಿತಿ ಅಪಘಾತ ಎಂದು ಬಂದಿದೆ.
ಕೈಗಳನ್ನು ಕಟ್ಟಿರೋ ಸುಳಿವಿಲ್ಲ: ಚಂದ್ರುವಿನ ತಲೆಗೆ ಬಲವಾದ ಆಯುಧದಿಂದ ಹೊಡೆದಿದ್ದಾರೆ. ಕೈ ಕಾಲುಗಳನ್ನಯ ಹಗ್ಗದಿಂದ ಕಟ್ಟಿದ್ದಾರೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಸೇರಿದಂತೆ ಅವರ ಕುಟುಂಬಸ್ಥರು ಆರೋಪ ಮಾಡಿದ್ದರು. ಹೊನ್ನಾಳಿ ಠಾಣೆ (Honnalli Police Station) ಯಲ್ಲಿ ಐಪಿಸಿ 302 ಹಾಗೂ 201 ಅಡಿಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಪ್ರಾಥಮಿಕ ವರದಿಯಲ್ಲಿ ಇದು ಅಪಘಾತವೇ ಹೊರತು ಕೊಲೆ ಅಲ್ಲ. ಚಂದ್ರುವಿನ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅಲ್ಲದೆ ಕೈಗಳಿಗೆ ಹಗ್ಗ ಕಟ್ಟಿಲ್ಲ, ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಇನ್ನೊಂದು ವಾರದೊಳಗೆ ಪಿಎಂ ವರದಿ ಸೇರಿದಂತೆ ಚಂದ್ರು ಸಾವಿನ ತನಿಖಾ ವರದಿ ಸಿಗಲಿದೆ.
ಒಟ್ಟಿನಲ್ಲಿ ಪೊಲೀಸರ ವಾದವೇ ಒಂದಾದ್ರೆ, ರೇಣುಕಾಚಾರ್ಯ ಕುಟುಂಬಸ್ಥರ ಆರೋಪವೇ ಇನ್ನೊಂದು. ವಾರದೊಳಗೆ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಲಿದ್ದು, ಎಲ್ಲ ಗೊಂದಲಗಳಿವೆ ತೆರೆ ಬೀಳಲಿದೆ.