ಬಳ್ಳಾರಿ: ಜಿಲ್ಲೆಯ ಶ್ರೀಕೃಷ್ಣ ದೇವರಾಯ ವಿವಿ ನಕಲಿ ಅಂಕಪಟ್ಟಿ ವಿವಾದ ಮತ್ತೆ ಸದ್ದು ಮಾಡುತ್ತಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ನೈಜತೆ ಪ್ರಮಾಣ ಪತ್ರ ಸಲ್ಲಿಸಲು ನೀಡಿದ ಗಡುವು ಸೆಪ್ಟೆಂಬರ್ 10ಕ್ಕೆ ಅಂತ್ಯಗೊಂಡಿದೆ. ಹೀಗಾಗಿ ನೈಜತೆ ಪ್ರಮಾಣ ಪತ್ರ ಸಲ್ಲಿಸದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿ ಸಿಗದೇ ಮತ್ತೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಗೆ ಸೇರಿದ ಕಾಲೇಜುಗಳಲ್ಲಿ ನಕಲಿ ಅಂಕಪಟ್ಟಿ ನೀಡಿ ಅಕ್ರಮ ಪ್ರವೇಶ ಪಡೆದಿದ್ದ 820 ವಿದ್ಯಾರ್ಥಿಗಳು ಮನೆಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಬರೆಯಲು ವಿವಿ ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ.
ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವುದರ ಜೊತೆಗೆ ನೈಜತೆ ಪ್ರಮಾಣ ಪತ್ರ ಪಡೆಯುವುದು ವಿವಿಗೆ ಬಿಟ್ಟದ್ದು ಅಂತ ಕೋರ್ಟ್ ಈ ಹಿಂದೆ ಹೇಳಿತ್ತು. ಎಲ್ಲಾ ವಿದ್ಯಾರ್ಥಿಗಳು ನೈಜತೆ ಪ್ರಮಾಣ ಪತ್ರ ಸಲ್ಲಿಸುವಂತೆ ವಿವಿ ಆದೇಶ ಹೊರಡಿಸಿದ ನಂತರ ಕೇವಲ 8-10 ವಿದ್ಯಾರ್ಥಿಗಳು ಮಾತ್ರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ನಕಲಿ ಅಂಕ ಪಡೆದು ಮೂರ್ನಾಲ್ಕು ಸೆಮಿಸ್ಟರ್ ಮುಗಿಸಿರುವ ವಿದ್ಯಾರ್ಥಿಗಳು ನೈಜತೆ ಪ್ರಮಾಣ ಪತ್ರ ಕೇಳುತ್ತಿರುವುದು ಸರಿಯಲ್ಲವೆಂದು ವಾದಿಸುತ್ತಿದ್ದಾರೆ.