ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ನಗದು ಹಣ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆಯ ಅಣ್ಣೂರು ಕೇರಿ ಬಳಿಯ ವಡ್ಡರ ಹೊಸಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಿರ್ದೇಶನದಂತೆ ಗ್ರಾಮಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಎಲ್ಲರೆದುರೇ ಎರಡು ಸಾವಿರ ರೂ. ಮುಖಬೆಲೆಯ 50 ನೋಟುಗಳನ್ನು ಮೃತ ರೈತನ ಕುಟುಂಬದವರಿಗೆ ನೀಡಿದ್ರು. ಆದ್ರೆ ಹಣ ನೀಡುವಾಗ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ರು ಎನ್ನಲಾಗಿದೆ.
ಇದೀಗ ಬಿಎಸ್ ಯಡಿಯೂರಪ್ಪ ಹಣ ನೀಡುತ್ತಿರುವ ವಿಡಿಯೋ ತುಣುಕು ವಾಟ್ಸಪ್ ನಲ್ಲಿ ಹರದಾಡಿ ವೈರಲ್ ಆಗಿದೆ. ಒಂದು ಲಕ್ಷ ರೂಪಾಯಿ ಪಕ್ಷದಿಂದ ನೆರವು ನೀಡಿದ್ದೇವೆ ಎಂದು ಸ್ವತಃ ಯಡಿಯೂರಪ್ಪನವರೇ ಮಾಧ್ಯಮದವರಿಗೆ ಹೇಳಿದ್ದಾರೆ. ಇದು ಒಂದು ಸಮುದಾಯದವನ್ನು ಓಲೈಕೆ ಮಾಡುವ ತಂತ್ರ ಎನ್ನಲಾಗ್ತಿದೆ.