ಕಲಬುರಗಿ: ಪ್ರಿಯಕರನೊಬ್ಬ ಎರಡು ವರ್ಷಗಳ ಕಾಲ ಪ್ರೀತಿಸಿದ್ದ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ನಡೆದಿದೆ.
ಶರಣು ಮತ್ತು ರೇಣುಕಾ ಎಂಬವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ತಡಗಂಚಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೇಮದ ಬಲೆಗೆ ಬಿದ್ದಿದ್ರು. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಇಬ್ಬರ ಪೋಷಕರು ಜೂನ್ 5ರಂದು ಮದುವೆಯನ್ನ ಸಹ ಫಿಕ್ಸ್ ಮಾಡಿದ್ದರು. ಆದರೆ ಅಷ್ಟರೊಳಗೆ ಶರಣು ಮೇ 26ರಂದು ರೇಣುಕಾಳ ಅಪ್ರಾಪ್ತ ಸಹೋದರಿಯನ್ನು ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.
ಸಹಜವಾಗಿಯೇ ಕೋಪಗೊಂಡ ರೇಣುಕಾ, ಪ್ರಿಯಕರ ಶರಣು ಜೊತೆ ಜಗಳ ಆರಂಭಿಸಿದ್ದಾರೆ. ರವಿವಾರ ಶರಣು ತನ್ನ ಸ್ನೇಹಿತರೊಂದಿಗೆ ಸೇರಿ ರೇಣುಕಾ ಅವರನ್ನು ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ನದಿಯಲ್ಲಿ ರೇಣುಕಾ ಮುಳುಗುತ್ತಿದ್ದುದನ್ನು ಗಮಿನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾಗುತ್ತಿದ್ದಂತೆ ಶರಣು ಸಹ ನದಿಗೆ ಧುಮುಕಿ ರೇಣುಕಾರನ್ನು ಕಾಪಾಡುವಂತೆ ನಾಟಕ ಮಾಡಿದ್ದಾನೆ. ಇದೀಗ ರೇಣುಕಾ ಅವರಿಗೆ ಪ್ರಜ್ಞೆ ಬಂದಿದ್ದು, ಗೆಳಯ ಶರಣು ನಿಜರೂಪ ಬಯಲಾಗಿದೆ.
ನನಗೂ ಇದಕ್ಕೂ ಸಂಬಂಧವಿಲ್ಲ. ಅವನಿಗೂ ಮತ್ತು ನನ್ನ ಸಂಬಂಧಿಯಾದ ರೇಣುಕಾಳಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶರಣು ನನ್ನ ಹೆದರಿಸಿ ನನಗೆ ತಾಳಿ ಕಟ್ಟಿ ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾಯಿದ್ದಾನೆ ಎಂದು ಶರಣುನಿಂದ ತಾಳಿ ಕಟ್ಟಿಸಿಕೊಂಡಿರುವ ಅಪ್ರಾಪ್ತೆ ಹೇಳಿದ್ದಾಳೆ.
ಸದ್ಯ ಶರಣು ಪೋಲಿಸರ ವಶದಲ್ಲಿದ್ದಾನೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.