ಬೆಂಗಳೂರು: ರಾಜ್ಯದ ಕನ್ನಡ ಸಂಘಟನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಪ್ರೇರಿತ ಕೆಲಸಗಳಿಕೆ ಬಳಕೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ರಾಜಕ್ಕೆ ಬರುವ ದಿನ ಬಂದ್ ಮಾಡಲಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಪ್ರಯೋಜಿತ ಬಂದ್ ಆಗಿದ್ದು, ಅವರು ಕಪ್ಪು ಬಾವುಟ ತೋರಿಸಿದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಬಂದಾಗ ನಾವು ಕೂಡ ಅದನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಮತ ಹಾಕದಂತೆ ಕರವೇ ಕರೆ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ನಮಗೂ ಸಂಬಂಧ ಇಲ್ಲ. ನಾವು ನಾರಾಯಣ ಗೌಡ ಬಣದ ವಿರುದ್ಧ ಅಥವಾ ಬೇರೆಯವರ ವಿರುದ್ಧ ಮಾತನಾಡಿಲ್ಲ. ಈ ಬಗ್ಗೆ ನಾವೂ ಯಾವುದೇ ಹೇಳಿಕೆ ಕೊಡಲ್ಲ. ಬಿಜೆಪಿ ವಿರುದ್ಧ ಹೇಳಿಕೆಗೂ ನಮಗೂ ಸಂಬಂಧ ಇಲ್ಲ, ಗೋಹತ್ಯೆಯ ನಿಲುವಿನ ಬಗ್ಗೆ ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ ಎಂದರು.
ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಅಪರಾದ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರ, ಬೆಂಗಳೂರಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ. ಜನ ಪೊಲೀಸರ ರಕ್ಷಣೆಯಲ್ಲಿದ್ದಾರಾ? ಅಥವಾ ಗೂಂಡಾಗಳು ಅಳ್ವಿಕೆಯಲ್ಲಿದ್ದಾರಾ?. ಎಸಿಪಿಯವರ ಶ್ರೀಮತಿಯ ಸರ ಅಪಹರಣ ಅಗುತ್ತದೆ ಎಂದರೆ ಸಾಮಾನ್ಯರಿಗೆ ರಕ್ಷಣೆ ಎಲ್ಲಿ ಎಂದು ಪ್ರಶ್ನಿಸಿದರು. ಮಹಿಳೆಯರು ಇನ್ನು ಮುಂದೆ ಪೊಲೀಸ್ ಠಾಣೆಗೆ ಫೋನ್ ಮಾಡಿ ಮನೆ ಹೊರಗಡೆ ಬಂದು ರಂಗೋಲಿ ಹಾಕಬಹುದಾ ಎಂದು ಕೇಳಿ, ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಒಂದು ತಿಂಗಳಲ್ಲಿ 13 ಮಂದಿ ಪೊಲೀಸರ ಮೇಲೆ ಹಲ್ಲೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್ವೈ ಪ್ರಶ್ನೆ
ಬೆಂಗಳೂರು ಈಗ ಕ್ರೈಮ್ ಸಿಟಿಯಾಗಿದೆ. ಪೊಲೀಸರನ್ನು ಮೂರು ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸರು ಮಲಗಿದ್ದಾರೆ. ಗುಂಡಾಗಳು ಆಳ್ವಿಕೆ ಮಾಡುತ್ತಿದ್ದಾರೆ. ಗೃಹ ಇಲಾಖೆ ಪ್ರಸ್ತುತ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದು ಕಡೆ ಸಿಎಂ, ಇನ್ನೊಂದು ಕಡೆ ಕೆಂಪಯ್ಯ, ಮತ್ತೊಂದೆಡೆ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಭಾರೀ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಂದ್ ಕಾಂಗ್ರೆಸ್ ಪ್ರಾಯೋಜಿತ, ರಾಜ್ಯಕ್ಕೆ ರಾಹುಲ್ ಗಾಂಧಿ ಬಂದಾಗ ನಾವ್ ಬಂದ್ ಮಾಡ್ತೀವಿ- ಜಗದೀಶ್ ಶೆಟ್ಟರ್