ಬೆಂಗಳೂರು: ಐಸಿಸಿ ಅಂಡರ್ 19 ಟಿ20 ವಿಶ್ವಕಪ್ ಸರಣಿ ಗೆದ್ದ ಬಳಿಕ ಘೋಷಣೆ ಮಾಡಿದ್ದ ಬಹುಮಾನದಲ್ಲಿನ ತಾರತಮ್ಯ ವಿರೋಧಿಸಿದ್ದ ರಾಹುಲ್ ದ್ರಾವಿಡ್ ಅಭಿಪ್ರಾಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಣಿದಿದೆ ಎನ್ನಲಾಗಿದ್ದು, ಬಹುಮಾನದ ಮೊತ್ತದ ತಾರತಮ್ಯ ಸರಿ ಮಾಡಿ ಶೀಘ್ರವೇ ಸಮಾನ ಬಹುಮಾನ ಘೋಷಣೆ ಮಾಡಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮಾಧ್ಯಮದ ವರದಿಯ ಪ್ರಕಾರ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ಇತರೆ ಸಿಬ್ಬಂದಿಗೆ ಸಮಾನವಾಗಿ 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಐಸಿಸಿ ವಿಶ್ವಕಪ್ ಗೆ ತಂಡವನ್ನು ತರಬೇತಿ ನೀಡಲು ಸಹಕಾರ ನೀಡಿದ ಇತರೇ ಸಿಬ್ಬಂದಿಯನ್ನು ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲಿಯೇ ಬಿಸಿಸಿಐ ಎಲ್ಲರಿಗೂ ಒಂದೇ ರೀತಿಯಲ್ಲಿ ನಗದು ಬಹುಮಾನ ಘೋಷಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಟೀಂ ಇಂಡಿಯಾ ಅಂಡರ್ 19 ತಂಡ ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ನೀಡಿದ ನಗದು ಬಹುಮಾನದಲ್ಲಿನ ತಾರತಮ್ಯ ನೀತಿಗೆ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಡರ್ 19 ತಂಡ ಐಸಿಸಿ ವಿಶ್ವಕಪ್ ಮುಡಿಗೆರಿಸಿಕೊಂಡ ತಂಡದ ಸಾಧನೆಗೆ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ., ತಂಡದ ಸಿಬ್ಬಂದಿಗೆ 20 ಲಕ್ಷ ರೂ., ಆಟಗಾರಿಗೆ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಬಿಸಿಸಿಐನ ಈ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಹುಲ್ ವಿಶ್ವಕಪ್ ಗೆದ್ದಿರುವುದರ ಹಿಂದೆ ತಂಡದ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.
ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಅವರು ತಂಡದ ಗೆಲುವು ಎಲ್ಲರ ಪರಿಶ್ರಮದಿಂದ ಸಾಧ್ಯವಾಯಿತು. ಆದರೆ ಈ ವೇಳೆ ನನ್ನನ್ನು ಮಾತ್ರ ಹೈಲೆಟ್ ಮಾಡಲಾಗುತ್ತಿದೆ. ಇದರಿಂದ ಸ್ಪಲ್ಪ ಮುಜುಗರ ಉಂಟಾಗುತ್ತದೆ. ಆದರೆ ತಂಡದ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಆದರೆ ನಾವೆಲ್ಲರೂ ಈ ಮಕ್ಕಳಿಗೆ ಉತ್ತಮ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದರು.