– ಸರ್ಕಾರದಿಂದಲೇ ತಲಾ 75 ಸಾವಿರ ವೆಚ್ಚ
ಬೆಂಗಳೂರು: ರಾಜ್ಯದ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ ದೊರಕಿದ್ದು, ಈಗ ಒಂದು ತಂಡ ವಿದೇಶ ಪ್ರವಾಸಕ್ಕೆ ತರಳುತ್ತಿದೆ. ನೈರ್ಮಲ್ಯ ಕಾಪಾಡುವ ಸಂಬಂಧ ಸರ್ಕಾರ ರೂಪಿಸಿರುವ ಪೌರಕಾರ್ಮಿಕರ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿ ಪೌರಕಾರ್ಮಿಕರು ಸಿಂಗಾಪುರಕ್ಕೆ ತೆರಳ್ತಿದ್ದಾರೆ.
ಈ ವರ್ಷದಲ್ಲಿ ಒಟ್ಟು 1 ಸಾವಿರ ಪೌರ ಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ 40 ಜನ ತೆರಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಬೀಳ್ಕೊಡುಗೆ ಕೊಟ್ಟಿದ್ದಾರೆ.
ಪ್ರವಾಸಕ್ಕೆ ತಲಾ 75 ಸಾವಿರ ರೂಪಾಯಿ ವೆಚ್ಚ ಮಾಡಲಾಗ್ತಿದ್ದು, ವೈಯಕ್ತಿಕ ಖರ್ಚಿಗೆ 5 ಸಾವಿರ ರೂ. ಹಣವನ್ನು ನೀಡಲಾಗಿದೆ. ಪೌರಕಾರ್ಮಿಕರಿಗೆ ಮಾರ್ಗದರ್ಶನ ನೀಡಲು ಇಬ್ಬರು ಅಧಿಕಾರಿಗಳು ತಂಡದ ಜೊತೆ ತೆರಳಿದ್ದಾರೆ. ಮೊದಲ ತಂಡದಲ್ಲಿ 37 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಸಿಂಗಾಪುರದಲ್ಲಿರುವ ವಿಯೋಲಾ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಲಿರುವ ಪೌರಕಾರ್ಮಿಕರ ತಂಡ ಘನತ್ಯಾಜ ಸಂಗ್ರಹ ಮತ್ತು ಸಂಸ್ಕರಣೆ ಬಗ್ಗೆ ಅಧ್ಯಯನ ನಡೆಸಲಿದೆ.