ಬೆಂಗಳೂರು: ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ಕೊಟ್ಟಿದ್ದು, ನಗರದಲ್ಲಿ ಇನ್ಮುಂದೆ ಕಸ ವಿಲೇವಾರಿಗಾಗಿ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದೆ.
ಹೌದು, ಮಹಾನಗರ ಜನರು ಮೇಲೆ ಬಿಬಿಎಂಪಿ ಕೌಸ್ಸಿಲ್ ಆಸ್ತಿಯ ವಿಸ್ತೀರ್ಣ ಆಧರಿಸಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಕಳೆದ 7 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ. ಲೆಕ್ಕ ಪರಿಶೋಧಕರ ಆಕ್ಷೇಪವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸ್ಥಾಯಿ ಸಮಿತಿ ಸಲಹೆ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳಲಿದೆ ಅಂತಾ ಪಾಲಿಕೆಯ ಅರೋಗ್ಯ ಮತ್ತು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ.
ಇದುವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ತೆರಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಆಸ್ತಿ ವಿಸ್ತೀರ್ಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಈ ಕುರಿತು ಕೌನ್ಸಿಲ್ ನಲ್ಲಿ ಚರ್ಚೆ ನಡೆದು ಒಪ್ಪಿಗೆ ಪಡೆದರೆ ಸಾರ್ವಜನಿಕರು ಶೇ.15ರಷ್ಟು ಹೆಚ್ಚಿನ ಕಸದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ತೆರಿಗೆ ಹೆಚ್ಚಳಕ್ಕೆ ವಿರೋಧ: ಬಿಬಿಎಂಪಿ ತೆರಿಗೆ ಹೆಚ್ಚಳ ಪ್ರಸ್ತಾವನೆಗೆ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಶಾಲಾ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳು, ಟೆಕ್ಪಾರ್ಕ್ಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಿಬಿಎಂಪಿ ಈ ನಿರ್ಧಾರ ವಾಪಸ್ ಪಡೆಯದೆ ಹೋದರೆ ಅಹೋರಾತ್ರಿ ಧರಣಿಯ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬಿಬಿಎಂಪಿ ಕಸ ವಿಲೇವಾರಿ ಮಾಡಲು ಅಧಿಕ ವೆಚ್ಚ ಮಾಡುತ್ತಿದ್ದು, ಪ್ರಸ್ತುತ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಸ ನಿರ್ವಹಣೆ ಸಮಸ್ಯೆ ನಗರದಲ್ಲಿ ಪ್ರಮುಖ ಸಮಸ್ಯೆ ಆಗಿರುವುದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಇದುವರೆಗೆ ಬಿಬಿಎಂಪಿ ಬಾಡಿಗೆ ನೀಡಿದ ಕಟ್ಟಡಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹೊಸ ಪ್ರಸ್ತಾವನೆಯಲ್ಲಿ ರದ್ದು ಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಬಿಬಿಎಂಪಿ ತೆರಿಗೆ ಹೆಚ್ಚಳ ನಿರ್ಧಾರದಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಹೆಚ್ಚಳವಾಗಲಿದೆ. ಅಲ್ಲದೇ ನಗರದಲ್ಲಿ ವಾಸಿಸುತ್ತಿರುವ ಗಣ್ಯರಿಗೂ ತೆರಿಗೆ ಹೆಚ್ಚಳ ಬಿಸಿ ತಟ್ಟಲಿದೆ.