ಬೆಂಗಳೂರು: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ ರೆಡ್ಡಿ ಪಾಳೆಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದೆ. ನಾಳೆ ಶ್ರೀರಾಮುಲು ಜತೆ ಜನಾರ್ದನ ರೆಡ್ಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಅಮಿತ್ ಶಾ ಹೇಳಿಕೆಯ ದಿನವೇ ಮುಂಬೈಗೆ ತೆರಳಿದ್ದ ಜನಾರ್ದನ ರೆಡ್ಡಿ ಸದ್ಯ ಮುಂಬೈ ಪ್ರವಾಸದಲ್ಲಿದ್ದಾರೆ. ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಾದುನೋಡುವ ತಂತ್ರಕ್ಕೆ ಮೊರೆ ಹೋಗಲು ಜನಾರ್ದನ ರೆಡ್ಡಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಆಪ್ತ ಮಿತ್ರ ಶ್ರೀರಾಮುಲು, ಸಹೋದರ ಸೋಮಶೇಖರ ರೆಡ್ಡಿಯನ್ನ ಅಖಾಡಕ್ಕಿಳಿಸಲು ಜನಾರ್ದನ ರೆಡ್ಡಿ ಒಲವು ತೋರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು, ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಡಿ ಸ್ಪರ್ಧೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ನಾಳೆ ಶ್ರೀರಾಮುಲು ಜೊತೆ ಮಹತ್ವದ ಮಾತುಕತೆ ನಡೆಸಲಿರುವ ಜನಾರ್ದನ ರೆಡ್ಡಿ ಅಮಿತ್ ಶಾ ಹೇಳಿಕೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.