ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನ ಕರಾವಳಿಯ ಎರಡು ಜಿಲ್ಲೆಯಲ್ಲಿ ಓಡಾಟ ನಡೆಸಿದ್ದಾರೆ. ರಾತ್ರಿ ಪ್ರವಾಸಿ ಬಂಗಲೆಯಲ್ಲಿ ವಾಸ್ತವ್ಯಕ್ಕೆ ತೆರಳಿದ್ದ ಅಮಿತ್ ಶಾ, ರಾತ್ರೋರಾತ್ರಿ ಸ್ವಾಮೀಜಿಗಳ ಸಭೆ ನಡೆಸಿದ್ದಾರೆ.
ಪೇಜಾವರ ಮಠಕ್ಕೆ ಆಗಮಿಸಿದ ಅಮಿತ್ ಶಾ, ಮೂರು ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿದ್ರು. ಅಮಿತ್ ಶಾ ಪಕ್ಷದ ಪರವಾಗಿ ಕೆಲ ಬೇಡಿಕೆ ಇಟ್ಟರು. ಈ ಬಾರಿಯ ಚುನಾವಣೆಯಲ್ಲಿ ಸಹಾಯ ಕೋರಿದರು. ಬಾಂಗ್ಲಾ ವಲಸಿಗರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ರಾಜ್ಯಗಳ ಸಹಕಾರ ಬೇಕು. ಸನಾತನ ಧರ್ಮದ ಮಹತ್ವ ವಿಶ್ವಕ್ಕೆ ಪರಿಚಯಿಸಲು ಸ್ವಾಮೀಜಿಗಳ ಸಹಕಾರ ಬೇಕು ಎಂದು ಅಮಿತ್ ಶಾ ಕೇಳಿಕೊಂಡರು.
ಸಂತರು ತಮ್ಮ ಅಭಿಪ್ರಾಯ ಮಂಡಿಸಿದ್ದು, ದೇಶದಲ್ಲಿ ಸಮಾನ ಕಾನೂನು-ಸಮಾನ ನ್ಯಾಯವನ್ನು ಅಪೇಕ್ಷಿಸಿದರು. ಧರ್ಮ, ಜಾತಿಯ ಆಧಾರದಲ್ಲಿ ಸವಲತ್ತು ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಮಹಾದಾಯಿ ವಿಚಾರದಲ್ಲಿ ಬಿಜೆಪಿ ಒಂದು ನಿಲುವಿಗೆ ಬರಬೇಕು. ಕಾಂಗ್ರೆಸ್ ಸಹಾಯ ಮಾಡದಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಹೆಚ್ಚು ಗಮನ ಕೊಡಬೇಕು ಎಂದು ಕೇಳಿಕೊಂಡರು. ಸುಮಾರು ಒಂದು ಗಂಟೆಗಳ ಕಾಲ ಸ್ವಾಮೀಜಿಗಳ ಜೊತೆ ಅಮಿತ್ ಶಾ ಗೌಪ್ಯ ಮಾತುಕತೆ ನಡೆಸಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಮಿತ್ ಶಾ ಅವರ ಈ ನಡೆ ಬಹಳ ಮಹತ್ವ ಪಡೆದುಕೊಂಡಿದೆ. ಇಂದು ಅಮಿತ್ ಶಾ ಪೇಜಾವರ ಮಠಕ್ಕೆ ಭೇಟಿ ನೀಡಲಿದ್ದಾರೆ.