ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ ನಟ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ (ಸತ್ಯನಾ.. ಧೈರ್ಯನಾ..) ಎಂಬ ಆಯ್ಕೆ ಇತ್ತು. ಅದರಲ್ಲಿ ಶ್ರೀಮುರಳಿ `ಧೈರ್ಯ’ ವನ್ನ ಆಯ್ಕೆ ಮಾಡಿಕೊಂಡಿದ್ದರು. ನಂತರ ಶಿವಣ್ಣ ನಿಮ್ಮ ಜೊತೆ ಅಭಿನಯಿಸಿದ ನಟಿಯರಲ್ಲಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ಫೋನ್ ಗೆ `ಐ ಲವ್ ಯುವರ್ ಐಸ್’ ಎಂದು ಸಂದೇಶ ಕಳುಹಿಸಬೇಕು ಎಂದು ಹೇಳಿದ್ದಾರೆ.
ಶಿವಣ್ಣ ಹೇಳಿದಂತೆ ಮುರಳಿ ಅವರು ಧೈರ್ಯವಾಗಿ “ಐ ಲವ್ ಯುವರ್ ಐಸ್” (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ನಟಿ ಮಾನ್ಯ ಅವರ ಫೋನ್ ನಂಬರ್ ಗೆ ಮೆಸೇಜ್ ಕಳುಹಿಸಿದ್ದು, ಕಾರ್ಯಕ್ರಮದಲ್ಲಿ ಶಿವಣ್ಣ ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದ್ದಾರೆ.
ನಟಿ ಮಾನ್ಯ ಅವರು ಕನ್ನಡದಲ್ಲಿ ದರ್ಶನ್, ಶ್ರೀಮುರಳಿ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಅಭಿಯಿಸಿದ್ದಾರೆ. 2005 ರಲ್ಲಿ ತೆರೆಕಂಡ ದಿವಂಗತ ಡಾ.ವಿಷ್ಣುವರ್ಧನ್ ನಟನೆಯ `ವರ್ಷ’, ದರ್ಶನ್ ಅಭಿನಯದ `ಶಾಸ್ತ್ರಿ’ ಮತ್ತು ಶ್ರೀಮುರಳಿ ಅಭಿನಯದ `ಶಂಭು’ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಮಾನ್ಯ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಭಿನಯಿಸಿದ್ದಾರೆ.
ಸದ್ಯಕ್ಕೆ ನಟಿ ಮಾನ್ಯ ಮದುವೆಯಾಗಿ ಮಗುವಿನ ತಾಯಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಮಾನ್ಯ ಮತ್ತು ಶ್ರೀಮುರಳಿ ಇಬ್ಬರು ಮಾನ್ಯ ಒಳ್ಳೆಯ ಸ್ನೇಹಿತರು. ಅಷ್ಟೇ ಅಲ್ಲದೇ ಶ್ರೀಮುರಳಿ ಅವರ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಸ್ನೇಹಿತರಾಗಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ಅವರು ನ್ಯೂಯಾರ್ಕ್ ಗೆ ಹೋಗಿದ್ದಾಗ ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.