ಉಡುಪಿ: ನೈಜ ಕಥೆಯನ್ನು ಆಧರಿಸಿ ಶೂಟಿಂಗ್ ನಡೆಸುತ್ತಿರುವ ‘ಕತ್ತಲೆ ಕೋಣೆ’ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ.
`ಕತ್ತಲೆ ಕೋಣೆ’ ಚಿತ್ರ ಕುಂದಾಪುರದ ಸಂದೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಕೇರಳ ಮತ್ತು ಮುಂಬೈ ಮೂಲದ ಕಲಾವಿದರು ಮತ್ತು ಟೆಕ್ನಿಷಿಯನ್ ಗಳು ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ಕುಂದಾಪುರದ ಕಾಡು, ಪಶ್ಚಿಮಘಟ್ಟದ ತಪ್ಪಲಿನ ಕಾಡುಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹಲವು ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳುತ್ತಿದೆ. ದಟ್ಟ ಕಾಡಿನ ನಡುವೆ ಒಂದು ಶಾಲೆ, ಶಾಲೆಯ ಮಕ್ಕಳು ಮರ ಹತ್ತಿ ಮಾವಿನ ಕಾಯಿಯನ್ನು ಕೀಳುವ ಸೀನ್ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟ ಮರದ ಮೇಲೆ ಕುಳಿತು ಮಾವಿನ ಕಾಯಿ ಕಿತ್ತು ಕೆಳಗೆ ನಿಂತಿದ್ದ ತನ್ನ ಸಹಪಾಠಿಗಳಿಗೆ ಕೊಡುತ್ತಿದ್ದ ವೇಳೆ ಕೊಂಬೆ ಮುರಿದು ಅವಘಡ ಸಂಭವಿಸಿದೆ.
ಸುಮಾರು 10 ಅಡಿ ಎತ್ತರದಿಂದ ವಿದ್ಯಾರ್ಥಿಯ ಪಾತ್ರಧಾರಿ ಮಂಗಳೂರು ಮೂಲದ ರವಿ ಹಠಾತ್ತನೆ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತರಚಿದ ಗಾಯಗಳಾಗಿದ್ದು, ಪ್ರಾಣಾಯದಿಂದ ಪಾರಾಗಿದ್ದಾನೆ. ಆದರೆ ಈ ಘಟನೆಯಿಂದ ಕಲಾವಿದ ವಾರಗಳ ಕಾಲ ಜ್ವರಕ್ಕೆ ತುತ್ತಾಗಿದ್ದಾನೆ. ಕತ್ತಲೆಕೋಣೆ ಹಾರರ್ ಚಿತ್ರವಾಗಿದ್ದು, ಬೆಚ್ಚಿಬೀಳುವ ಹಲವು ಘಟನೆಗಳು ನಡೆದಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಹಿಂದೆ ಚಿತ್ರೀಕರಣ ಮಾಡುವಾಗ ಲೈಟ್ ಇಂಜಿನಿಯರ್ ಕಟ್ಟಿದ್ದ ಲೈಟ್ ಅವರ ತಲೆಗೆ ಬಿದ್ದು ಗಾಯವಾದ ಘಟನೆಯೂ ನಡೆದಿದೆ. ಮಧ್ಯರಾತ್ರಿಯ ಶೂಟಿಂಗ್ ನಡೆಯುತ್ತಿದ್ದಾಗ, ಜನರೇಟರ್ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡಿದ್ದು, ಆಶ್ಚರ್ಯದ ಜೊತೆ ಭಯವಾಗುತ್ತಿದೆ. ಮುಂದೆ ಏನೆಲ್ಲ ಕಾದಿದಿಯೋ ಎಂದು ಆತಂಕ ಶುರುವಾಗಿದೆ ಎಂದು ಚಿತ್ರ ತಂಡ ಭಯದಿಂದ ಹೇಳುತ್ತಿದೆ.