ಮೈಸೂರು: ಮೈಸೂರಿನ ಟಿ. ನರಸೀಪುರದ ಕೊಳಚೆ ಪ್ರದೇಶವಾದ ದಾವಣಗೆರೆ ಕಾಲೋನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ 4 ತಿಂಗಳ ಹಸುಗೂಸು ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.
ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ ಗಂಡು ಮಗು ಮೃತ ದುರ್ದೈವಿ. ರಾತ್ರಿ ಏಕಾಏಕಿ ಜೋರಾಗಿ ಮಳೆ ಸುರಿದಿದ್ದು, ಜೋಪಡಿಯಂಥ ಮನೆಗೆ ನೀರು ನುಗ್ಗಿ ಹಸುಗೂಸು ಮೃತಪಟ್ಟಿದೆ. ಇದೇ ರೀತಿ ಆ ಏರಿಯಾದಲ್ಲಿನ ಎಲ್ಲಾ ಮನೆಗಳಿಗೂ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಪ್ರದೇಶದಲ್ಲಿ 36 ಕುಟುಂಬವಿದ್ದು, 150 ಜನರು ವಾಸಿಸುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಇದೇ ಪ್ರದೇಶದಲ್ಲಿ ಇವರೆಲ್ಲಾ ವಾಸವಿದ್ದು ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸುವಲ್ಲೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಳೆದ ವರ್ಷ ಇದೇ ರೀತಿಯ ಮಳೆ ಸಂದರ್ಭದಲ್ಲಿ ಹೆಗ್ಗಣಗಳು ಮನೆಗೆ ನುಗ್ಗಿ ಮಕ್ಕಳ ಕೈ ಬೆರಳು, ಕಾಲಿನ ಬೆರಳನ್ನು ತುಂಡರಿಸಿದ್ದವು.