ರಾಮನಗರ: ತಿನ್ನಿಸಿದ ಸೆರಲ್ಯಾಕ್ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ 3 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದಿದೆ.
ಮಾಗಡಿ ಪಟ್ಟಣದ ಹೊಸಪಾಳ್ಯದ ನಿವಾಸಿಗಳಾದ ಮಂಜುನಾಥ್ ಹಾಗೂ ಧನಲಕ್ಷ್ಮಿ ದಂಪತಿಯ 3 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಕಳೆದ 15 ದಿನಗಳಿಂದ ಮಗುವಿಗೆ ಸೆರಲ್ಯಾಕ್ ತಿನ್ನಿಸುತ್ತಿದ್ದರು. ಇಂದು ಸೆರಲ್ಯಾಕ್ ತಿನ್ನಿಸಿದ್ದು, ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ತೊಂದರೆ ಅನುಭವಿಸಿ ಮಗು ಸಾವನ್ನಪ್ಪಿದೆ.
ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ಸೆರಲ್ಯಾಕ್ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ್ದು ದೃಢಪಟ್ಟಿದೆ. ಮೂರು ತಿಂಗಳ ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಹಿಂದೆ ಸೇಬು ತಿಂದು ಬಾಲಕ ಸಾವನ್ನಪ್ಪಿದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಬಡಾವಣೆಯಲ್ಲಿ ನಡೆದಿತ್ತು. 6ನೇ ತರಗತಿ ವಿದ್ಯಾರ್ಥಿ ಆಸೀಫ್ (11) ಮೃತ ಬಾಲಕ. ಬಾಲಕ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ತಿನ್ನಲ್ಲು ಸೇಬು ಕೊಟ್ಟಿದ್ದರು. ಸೇಬು ತಿಂದ ಕೆಲ ಹೊತ್ತಿನಲ್ಲೇ ಆಸೀಫ್ ಗೆ ಉಸಿರಾಟದ ಸಮಸ್ಯೆ ಕಾಡುತ್ತಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಆಸೀಫ್ ಸಾವನ್ನಪ್ಪಿದ್ದನು.
ಮರಣೋತ್ತರ ಪರೀಕ್ಷೆ ಬಳಿಕ ಮೃತ ಆಸೀಫ್ ನ ಸಾವಿನ ಕಾರಣ ಬಯಲಾಗಿತ್ತು. ಗಂಟಲಿನಲ್ಲಿ ಸೇಬು ಸಿಲುಕಿಕೊಂಡು ಆಸೀಫ್ ಸಾವು ಎಂದು ವೈದ್ಯರು ಧೃಢಪಡಿಸಿದ್ದರು. ಅನ್ನನಾಳದ ಬದಲು ಉಸಿರಾಟದ ನಾಳಕ್ಕೆ ಸೇಬು ಸೇರಿದ್ದರಿಂದ ಆಸೀಫ್ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದನು. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!