ಧಾರವಾಡ/ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶಕ್ಕೆ ಜನರನ್ನು ಕರೆತರಲು ನೂರಾರು ಬಸ್ ಗಳನ್ನ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಯವಾಗಿದೆ.
ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ವಿಭಾಗದಿಂದಲೇ 200 ಬಸ್ ಗಳು ಹೊರಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಎರಡು ದಿನಗಳ ಕಾಲ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುತ್ತದೆ, ಕ್ಷಮೆ ಇರಲಿ ಎಂದು ಅಧಿಕಾರಿಗಳು ಬಿತ್ತಿ ಪತ್ರ ಅಂಟಿಸಿದ್ದಾರೆ. ಬಸ್ ಸಮಸ್ಯೆ ಯಿಂದ ರಾತ್ರಿಯಿಡೀ ಸಾರ್ವಜನಿಕರು ಪರದಾಡಿದ್ದಾರೆ. ರಾತ್ರಿಯಿಂದ ಬಸ್ ಗಾಗಿ ಕಾದು ಕಾದು ಸಾರ್ವಜನಿಕರು ಸುಸ್ತಾಗಿದ್ದು, ಸಾರ್ವಜನಿಕರಿಗೆ ಸಮಸ್ಯೆ ಮಾಡಿ ಬಸ್ ಕಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಬಸ್ ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ. ಬಸ್ ಇಲ್ಲದೇ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಟ ಅಣುಭವಿಸಿದ್ದು, ಹಿಡಿಶಾಪ ಹಾಕಿದ್ದಾರೆ.
ಇಂದು ಮಧ್ಯಾಹ್ನ 1.30ಕ್ಕೆ ಹೊಸಪೇಟೆಯಲ್ಲಿ ಹಾಗೂ ಸಂಜೆ ಕೊಪ್ಪಳದಲ್ಲಿ ನಡೆಯುವ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.