ಇತ್ತೀಚೆಗೆ ಎಷ್ಟೋ ಜನ ಮಲೆನಾಡಿನ (Malenadu) ಭಾಗಗಳಿಗೆ ಟ್ರಿಪ್ (Tour) ಬಂದವರು ಅಲ್ಲಿನ ಮಳೆ (Rain), ಕಾಡು ವಿಡಿಯೋ ಮಾಡಿ ಯಾವಾಗಲೂ ಬಚ್ಚಲು ಮನೆ ಥರ ಇರುತ್ತೆ ಅನ್ನೋ ಸಿನಿಮಾ ಡೈಲಾಗ್ ಸೇರಿಸಿ ಹಂಚಿಕೊಳ್ತಿದಾರೆ. ಅವರಿಗೆಲ್ಲ ಮಲೆನಾಡು ಭೂಮಿ ಮೇಲಿನ ಸ್ವರ್ಗ ಅಂತ ಗೊತ್ತಿಲ್ಲ.. ಇಡೀ ವಿಶ್ವದಲ್ಲಿ ನನ್ನ ಪಾಲಿಗೆ ಕರ್ನಾಟಕದ (Karnataka) ಮಲೆನಾಡಿನ ಭಾಗಗಳು ಒಂದು ವಿಶೇಷವಾದ ಪ್ರಪಂಚವೇ ಸೈ.. ಹಾಗಂತ ಎಲ್ಲಾ ಪ್ರದೇಶಗಳಿಗೂ ತನ್ನದೇ ಆದ ಸೌಂದರ್ಯ, ವಿಶೇಷ ಇದ್ದೇ ಇರುತ್ತೆ.. ಅದು ಒಂದೊಂದು ಕಾಲದಲ್ಲಿ ಒಂದೊಂದು ಚೆಲುವು.. ಹಾಗೇ ಮಲೆನಾಡದಲ್ಲಿ ಮಳೆಗೆ ಇಲ್ಲಿನ ಪ್ರಕೃತಿ, ಜನಜೀವನ, ಸಣ್ಣ ಪುಟ್ಟ ಝರಿ ಜಲಪಾತಗಳು ಮತ್ತಷ್ಟು ಸೌಂದರ್ಯ ಹೆಚ್ಚಿಸುತ್ತವೆ.
ಮಲೆನಾಡಿಗೆ ಮತ್ತಷ್ಟು ಜೀವ ತುಂಬುವ ವಿಶೇಷ ಅತಿಥಿಗಳು ಸಹ ಇದ್ದಾರೆ. ಅವರೆಲ್ಲ ಮಳೆಗಾಲಕ್ಕೆ ಬಂದು ಹೋಗುವವರು. ಈಗ ಬಂದ್ರೆ ಮತ್ತೆ ಬರೋದು ಮುಂದಿನ ಮಳೆಗಾಲಕ್ಕೆ..! ಅಂತಹ ಕೆಲವು ಅತಿಥಿಗಳ ಪರಿಚಯನಾ ಇವತ್ತು ಮಾಡ್ಕೊಡ್ತಿನಿ.
ಅಪ್ಸರೆ ಜಡೆಯಂತ ಜಲಪಾತಗಳು!
ಮಲೆನಾಡಿನಲ್ಲಿ ಬರುವ ಈ ದೊಡ್ಡ ದೊಡ್ಡ ಜಲಪಾತಗಳನ್ನು ನಾವು ನೀವೆಲ್ಲ ನೋಡೇ ಇರುತ್ತೇವೆ. ಆದ್ರೆ ಈ ಮಳೆಗಾಲದಲ್ಲಿ ಮಾತ್ರ ಬಂದು ಹೋಗುವ, ಎಷ್ಟೋ ಹೆಸರಿಲ್ಲದ ಜಲಪಾತಗಳು ಲೆಕ್ಕಕ್ಕೆ ಸಿಗುವುದಿಲ್ಲ. ಅವೆಲ್ಲ ಹೀಗೆ ಹೈವೇ ಪಕ್ಕದಲ್ಲಿ ಕಾರು ನಿಲ್ಲಿಸಿದ ತಕ್ಷಣ ಕಣ್ಣಿಗೂ ಬೀಳೋದಿಲ್ಲ. ಅಂತಹ ಅಪ್ಸರೆಯರ ಜಡೆ ಚೆಲುವು ಕಾಣಬೇಕಾದರೆ, ಪಶ್ಚಿಮ ಘಟ್ಟಗಳ ಕಾಡುಗಳನ್ನು ಸೇರಬೇಕು. ಯಾವ ನದಿಯೋ ಗೊತ್ತಿಲ್ಲ… ಎಲ್ಲೋ ಒಂದೊಂದು ಮೂಲೆಯಲ್ಲಿ ಸಣ್ಣದಾಗಿ ಹುಟ್ಟಿ ಅಲ್ಲಲ್ಲಿ ಅದೆಷ್ಟೋ ಕಡೆಗಳಲ್ಲಿ ಧುಮುಕಿ ಹರಿಯುವ ಈ ಜಲಪಾತಗಳಿಗೆ ಹೆಸರಿಟ್ಟವರಿಲ್ಲ. ನೋಡಿದವರ ಸಂಖ್ಯೆಯೂ ಕಡಿಮೆ..! ಪೇಟೆಯ ಜನಕ್ಕೆ ಆ ಜಾಗಗಳು ಗೊತ್ತಿಲ್ಲ.. ಅಲ್ಲಿಯ ಹಳ್ಳಿಯ ಜನಗಳಿಗೆ ಅದು ವಿಶೇಷ ಎಂದು ಅನಿಸದೇ ಅವು ಅಪರಿಚಿತರಾಗೇ ಉಳಿದು ಬಿಡುತ್ತವೆ.
ಪ್ರೆಟ್ಟಿ ಫ್ಲವರ್ಸ್!
ಮಳೆಗಾಲದಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ಸಮಯದಲ್ಲಿ ಮಾತ್ರ ಕಾಣಸಿಗುವ ಹೂಗಳು ಸಿಗುತ್ತವೆ. ಅದರಲ್ಲಿ ನಾನಾ ಬಗೆಯ ಆರ್ಕಿಡ್ಗಳು ಹಾಗೂ ನೆಲದ ಮೇಲೆಯೇ ಅರಳಿ ಮಣ್ಣಾಗುವ ಅದೆಷ್ಟೋ ಅಪರಿಚಿತ ಹೂಗಳು ಸೇರಿವೆ. ಈ ಸಮಯದಲ್ಲಿ ಹೆಚ್ಚಿನದ್ದಾಗಿ ಕಾಣಸಿಗುವುದು ಸೀತಾಳೆ ಹೂ, ಮತ್ತು ಕಾಡು ಅರಶಿನದ ಹೂ, ಇವು ಮಳೆಯಗಾಲದಲ್ಲಿ ಮಲೆನಾಡಿನ ಅಂಗಳವನ್ನು ಶೃಂಗರಿಸಲು ಬರುವ ವಿಶೇಷ ಆಭರಣಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಅಷ್ಟೊಂದು ಚೆಂದವಾಗಿ ಅಲ್ಲಲ್ಲಿ ಅಲಂಕಾರಕ್ಕೆ ಜೋಡಿಸಿಟ್ಟಂತೆ ಅರಳಿ ನಿಂತಿರುತ್ತವೆ ಈ ವಿಶೇಷ ಹೂಗಳು. ಇವು ಒಮ್ಮೆ ಆಗಿ ಹೋದರೆ ಮತ್ತೆ ಬರುವುದು ಮುಂದಿನ ಮಳೆಗಾಲಕ್ಕೆ. ಅಲ್ಲಿಯ ತನಕವೂ ಈ ಚೆಲುವು ಮಲೆನಾಡಿನ ಚೆಲುವೆಯ ಕೊರಳಿನಲ್ಲಿ ಹಾರವಾಗಿ ಉಳಿದಿರುತ್ತವೆ!
ಕಲರ್ ಫುಲ್ ಅಣಬೆಗಳು!
ಮಳೆ ಆರಂಭವಾಗಿ, ಒಂದು ಸಣ್ಣ ಬಿಸಿಲು ಬಿಟ್ರೆ ಸಾಕು.. ಕೆಲವು ಭಾಗಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಅದರಲ್ಲಿ ಕೆಲವನ್ನು ಮನುಷ್ಯರು ತಿನ್ನಬಹುದು. ಇನ್ನೂ ಕೆಲವು ವಿಷಕಾರಿ ಅಂಶಗಳಿರುವಂತಹ ಅಣಬೆಗಳು ಇರುತ್ತವೆ. ಒಟ್ಟಾರೆ ಈ ಅಣಬೆಗಳಿಗೆ ಪ್ರಕೃತಿ ದತ್ತವಾಗಿ ಬಂದಂತಹ ವಿಶೇಷ ಬಣ್ಣ, ಸೌಂದರ್ಯ ಇರುತ್ತದೆ. ಇಂತಹ ವಿಶೇಷತೆಯನ್ನ ನೀವು ಎಂಜಾಯ್ ಮಾಡೋದಾದ್ರೆ, ಸಿಟಿ ಬಿಟ್ಟು ಮಳೆಕಾಡಿನ ಕಡೆ ಸ್ವಲ್ಪ ಓಡಾಡಬೇಕು! ಇಲ್ಲಿ ಬೆಳೆಯುವ ತಿನ್ನಬಹುದಾದ ಅಣಬೆಗಳಲ್ಲಿ ಅಪಾರವಾದ ಪ್ರೊಟೀನ್ ಇರುತ್ತದೆ. ಅಲ್ಲದೇ ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ರೋಗನಿರೋದಕ ಶಕ್ತಿಯನ್ನು ಒದಗಿಸುತ್ತದೆ.
ಕಳಲೆ
ಇದು ಮಲೆನಾಡಿಗರ ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದು. ಕಳಲೆ ಎಂದರೆ ಬಿದಿರಿನ ಮೊಳಕೆ.. ಇದು ದೊಡ್ಡ ಬಿದರಿನ ಗಿಡಗಳ ಕೆಳಗೆ ಮಳೆಗಾಲದ ಸಮಯದಲ್ಲಿ ಮಾತ್ರ ಮೊಳಕೆಯೊಡೆಯುತ್ತವೆ. ಹೀಗೆ ಮೊಳಕೆಯಾದ ಕಳಲೆಯನ್ನು ತಂದು ಜನ ಸಾರು, ಪಲ್ಯವನ್ನು ಮಾಡುತ್ತಾರೆ. ಇದು ಮಲೆನಾಡಿಗರಿಗೆ ಉಚಿತವಾಗಿ ಸಿಗುವಂತಹದ್ದು. ಆದರೆ ಬೇರೆ ಭಾಗಗಳಲ್ಲಿ ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಇದರ ಮಾರಾಟ ನಿಷಿದ್ಧ ಆದರೂ ಜನ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾರಾಟ ಮಾಡ್ತಾರೆ.
ಪ್ರೊಟೀನ್ ಕಾರ್ಬೊಹೈಡ್ರೋಜನ್, ಖನಿಜಾಂಶ, ನಾರಿನಾಂಶ ಅಧಿಕವಾಗಿದ್ದು, ಕ್ಯಾಲ್ಸಿಯಂ, ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಕರುಳುಗೆ ಸಂಬಂಧಿಸಿದ ಸಮಸ್ಯೆಗೆ ಇದು ಉತ್ತಮ ಆಹಾರ. ಆಯುರ್ವೇದ ಮತ್ತು ನಾಟಿ ವೈದ್ಯರು ಸಹ ಇದನ್ನೊಂದು ಉತ್ತಮ ಔಷಧೀಯ ಗುಣಗಳಿರುವ ಆಹಾರ ಎಂದು ಸೇವಿಸಲು ಸಲಹೆ ನೀಡುತ್ತಾರೆ. ಇನ್ನೂ ಕ್ಯಾನ್ಸರ್ನಂತಹ ಮಾರಕ ರೋಗಗಳ ವಿರುದ್ಧವೂ ಹೋರಾಡುವ ಅಂಶಗಳನ್ನು ಕಳಲೆ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ.
ಏಡಿ& ಮೀನು!
ಮಲೆನಾಡಿನ ಕೃಷಿಕರಿಗೆ ಇದೊಂದು ಹಬ್ಬ..! ಮಳೆಗಾಲಕ್ಕೆ ಹೊರ ಬಂದು ಅಡ್ಡಾಡುವ ಏಡಿಗಳು, ನೀರು ಹರಿಯುವ ವಿರುದ್ಧವಾಗಿ ಸಂಚರಿಸಿ ಹುಲ್ಲಿನ ಮೇಲೆ ಹರಿದಾಡುವ ಮೀನುಗಳ ಶಿಕಾರಿ, ಅದರ ಮಜವೇ ಬೇರೆ. ತಲೆಗೆ ಟಾರ್ಚ್ ಕಟ್ಟಿ ʻಬಾವ ಕೆರೆ ತುಂಬಿ, ಮೀನು ಹತ್ತಿದಾವಂತೋʼ ಅಂತ ಹೇಳಿ ಹತ್ತಾರು ಜನ ಹೋಗಿ ಮೀನು ಏಡಿ ಹಿಡಿಯುವ ಗುಂಪು, ಅವುಗಳನ್ನು ಅಡುಗೆ ಮಾಡಿ ತಿನ್ನೋದಕ್ಕಿಂತ, ಅಲ್ಲಿ ಹುಡುಕಾಡೋದು ಒಂಥರಾ ಕ್ರೇಜ್. ಮೀನು ಸಿಕ್ಕಾಗ ಒಂಥರಾ ಖುಷಿ, ಸಿಗದಿದ್ದಾಗ ಅದನ್ನೇ ಹೇಳಿಕೊಂಡು ನಕ್ಕು ಕಾಲಕಳೆಯೋದು, ಅದೆಲ್ಲದರ ನಡುವೆ ಜೋ ಎಂದು ಸುರಿಯುವ ಮಳೆ, ಹರಿಯುವ ಹಳ್ಳಕೊಳ್ಳಗಳು!
ಈ ಚಟುವಟಿಕೆ ಎಲ್ಲಾ ನಡೆಯೋದು ಆದಷ್ಟು ಗದ್ದೆ ತೋಟಗಳ ಪಕ್ಕದಲ್ಲಿ. ಮೊದಲೆಲ್ಲ ಗದ್ದೆ ತೋಟಗಳಿಗೆ ರಸಾಯನಿಕ ಗೊಬ್ಬರ ಔಷಧಗಳ ಬಳಕೆ ಕಡಿಮೆ ಇತ್ತು. ಹಾಗಾಗಿ ಕೆರೆ, ಗದ್ದೆಗಳಲ್ಲಿ ಎಷ್ಟೊತ್ತಿಗೂ, ಮೀನುಗಳು, ಏಡಿಗಳು ಕಾಣ್ತಿದ್ವು, ಈಗೆಲ್ಲ ಲಾಭ ಬೇಕು ಅಂತ ಇರೋಬರೋ ಔಷಧಿ, ರಾಸಾಯನಿಕ ಗೊಬ್ಬರ ಹಾಕಿ ಏಡಿ, ಮೀನುಗಳ ಸಂತತಿ ಬಹಳಷ್ಟು ಕಡಿಮೆ ಆಗಿವೆ. ಇನ್ನೂ 10-20 ವರ್ಷಗಳಲ್ಲಿ ಇದೇ ರೀತಿ ಮುಂದುವರೆದ್ರೆ ನಿರ್ನಾಮವೇ ಆಗಬಹುದೇನೋ?
ಹೀಗೆ ಮಲೆನಾಡಲ್ಲಿ ಕಣ್ಣಿಗೆ ಕಾಣುವ, ಕಾಣದ ಅದೆಷ್ಟೋ ಅತಿಥಿಗಳು ಮಳೆಗಾಲಕ್ಕೆ ಬಂದು ಹೋಗ್ತಾರೆ.. ಅದು ಅದೆಷ್ಟು ಶತಶತಮಾನಗಳಿಂದ ನಡೆದುಕೊಂಡು ಬಂದಿದಿಯೋ, ಅದೆಷ್ಟು ಶತಮಾನಗಳು ಮುಂದುವರಿಯತ್ತೋ ಗೊತ್ತಿಲ್ಲ. ಈ ಚೆಲವು ಅದೆಷ್ಟೋ ಮಂದಿಯ ಅನುಭವಕ್ಕೆ ಬಂದಿರತ್ತೆ.. ಈ ಬರಹ ಓದಿ… ಹೌದಲ್ವಾ? ಅಂತ ಒಂದು ಸಾಲು ಹೇಳಿದ್ರೂ ಸಾಕು… ನನಗೆ ತೃಪ್ತಿ!
ಇಂತಹ ಪ್ರಕೃತಿಯ ಸೊಬಗನ್ನು ನೋಡಿ ಸಂಭ್ರಮಿಸಲು ನೀವು ಹೋಗಬೇಕಾದ ಒಂದಷ್ಟು ವಿಶಿಷ್ಟ ತಾಣಗಳ ಬಗ್ಗೆ ಮುಂದಿನ ಬುಧವಾರ (ಜೂ.25) ಮತ್ತೊಂದು ಬರಹದಲ್ಲಿ ತಿಳಿಸ್ತೇನೆ.
– ಗೋಪಾಲಕೃಷ್ಣ