– 2 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಗುರಿಯಾದರೆ ಶಾಸಕತ್ವ ಅನರ್ಹ
ಧಾರವಾಡ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಯೋಗೇಶ್ಗೌಡ (Yogesh Gowda) ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಲಯ ಇಂದು (ಏ.16) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಆದೇಶಿಸಿದೆ. ಅದರಂತೆ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಲಿದೆ. ಆರೋಪಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯೋ ಅನ್ನೋದು ಕೋರ್ಟ್ ಆದೇಶದತ್ತ ಚಿತ್ತ ನೆಟ್ಟಿದೆ. ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಕೇಸ್ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ
2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. ಇದೀಗ ಎ15 ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಕೋರ್ಟ್ ಅಪರಾಧಿಗಳು ಅಂತ ಹೇಳಿದೆ. ಉಳಿದ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿಸಿದೆ. ಇನ್ನು ಇಬ್ಬರು ನಿರ್ದೋಷಿಗಳನ್ನು ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿದ್ದಾರೆ. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ 17 ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ.
ಇನ್ನು, ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಬಗ್ಗೆ ತನಿಖೆ ನಡೆಸಲೂ ರಿಜಿಸ್ಟ್ರಾರ್ಗೆ ಕೋರ್ಟ್ ಸೂಚನೆ ನೀಡಿದೆ. ಅದರ ಜೊತೆಗೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಲಿದ್ದು, ಜಡ್ಜ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಕುಟುಂಬಸ್ಥರು ಕೋರ್ಟ್ ಹಾಲ್ನಲ್ಲಿಯೇ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳ ಕಣ್ಣೀರು ನೋಡಿ ದುಃಖಿತರಾದ ವಿನಯ್ ಕುಲಕರ್ಣಿ ತಾವೂ ಕಣ್ಣೀರಿಡುತ್ತಾ ಸಮಾಧಾನ ಮಾಡಿದರು.ಇದನ್ನೂ ಓದಿ: ಜೈಲಿಗೆ ವಿನಯ್ ಕುಲಕರ್ಣಿಯನ್ನು ಕರೆತರುತ್ತಿದ್ದ ಬಸ್ಸಿನಲ್ಲಿ ಬೆಂಕಿ
ಇಂದು 2 ವರ್ಷಕ್ಕಿಂತ ಹೆಚ್ಚು ಅವಧಿ ಶಿಕ್ಷೆಗೆ ಗುರಿಯಾದರೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4)ರ ಪ್ರಕಾರ ತಕ್ಷಣದಿಂದ ವಿನಯ್ ಕುಲಕರ್ಣಿ ಶಾಸಕತ್ವ ಅನರ್ಹಗೊಳ್ಳಲಿದೆ. ವಿನಯ್ ಕುಲಕರ್ಣಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವೂ ಇದೆ. 90 ದಿನಗಳ ಕಾಲಾವಕಾಶ ಇದ್ದು, ಅಷ್ಟರಲ್ಲಿ ಮೇಲಿನ ನ್ಯಾಯಾಲಯ ಶಿಕ್ಷೆಗೆ ತಡೆ ಕೊಟ್ಟರೆ ಶಾಸಕತ್ವ ಅನರ್ಹತೆಯಿಂದ ಬಚಾವ್ ಆಗಬಹುದು. ಶಾಸಕತ್ವ ಅನರ್ಹಗೊಂಡರೆ ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಕೋರ್ಟ್ನಿಂದ ತೀರ್ಪು ಹೊರಬಿದ್ದ ಬೆನ್ನಲ್ಲೇ ಯೋಗೇಶ್ ಗೌಡ ಆಪ್ತ ಬಸವರಾಜ್ ಕೊರವರ್ ಸಂತಸ ವ್ಯಕ್ತಪಡಿದ್ರು. ಸತತ 10 ವರ್ಷಗಳ ಹೋರಾಟ, ಶ್ರಮ, ನೋವಿಗೆ ಸಿಕ್ಕ ಜಯವಿದು. ದುಡ್ಡಿನ ದರ್ಪ, ಅಧಿಕಾರದ ಅಹಂನಲ್ಲಿ ಮೆರೆಯುತ್ತಿದ್ದವರಿಗೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ಕೊನೆಗೂ ಜಯ ಸಿಕ್ಕಿದೆ ಎಂದರು.ಇದನ್ನೂ ಓದಿ: ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು?

