ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಜೊತೆ ಲಸಿಕೆ ಅಭಿಯಾನಕ್ಕೆ ಕೇಂದ್ರ ಸಚಿವರ ಮೆಚ್ಚುಗೆ

Public TV
2 Min Read

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್-19 ಸೋಂಕಿನ ನಿರ್ವಹಣೆ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್‍ಸುಖ್ ಮಾಂಡವೀಯ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅಭಿನಂದಿಸಿದರು.

ಇಂದು ನಗರದ ಎಸ್.ಡಿ.ಎಸ್-ಟಿ.ಆರ್.ಸಿ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರದ ಮತ್ತು ಸಿ.ಎಸ್.ಆರ್. ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಲಸಿಕೆ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ರಾಜ್ಯದಲ್ಲಿ ಶೇ.83 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಸೆಪ್ಟೆಂಬರ್ 17ರಂದು ನಡೆಸಿದ ವಿಶೇಷ ಅಭಿಯಾನದಲ್ಲಿ ದೇಶದಲ್ಲಿ ಒಟ್ಟು 2.5 ಕೋಟಿ ಡೋಸ್ ಲಸಿಕೆ ನೀಡಲಾಯಿತು. ಇದರಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಸಚಿವರು ಅಭಿನಂದಿಸಿದರು. ಇದನ್ನೂ ಓದಿ: ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡಿದ ರಣ್‍ವೀರ್ – ಸಿಕ್ಸ್ ಪ್ಯಾಕ್ ನೋಡಿ ಹುಡ್ಗೀರು ಕ್ಲೀನ್ ಬೋಲ್ಡ್

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದಲ್ಲಿದ್ದರೂ ಇನ್ನೂ ಅಂತ್ಯವಾಗಿಲ್ಲ. ಆದ್ದರಿಂದ ಸರ್ಕಾರಗಳು ಜಾಗರೂಕರಾಗಿರುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಅಗತ್ಯವಿದ್ದೆಡೆ ಸುಲಭವಾಗಿ ಸ್ಥಳಾಂತರಿಸಬಹುದಾದ ಫೀಲ್ಡ್ ಆಸ್ಪತ್ರೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತಿರುವುದು ಒಂದು ದೂರದೃಷ್ಟಿಯ ನಡೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಬಸವರಾಜ ಬೊಮ್ಮಾಯಿ ಅವರು, ಪ್ರತಿ ಜಿಲ್ಲೆಯಲ್ಲಿ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಸಿದ್ಧವಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ನೆರವು ನೀಡುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ತಾವು ಬೆಳೆಯಲು ಅನುವು ಮಾಡಿಕೊಟ್ಟ ಸಮಾಜಕ್ಕೆ ಕೊಡುಗೆ ನೀಡಿ, ಉಪಕಾರ ಸ್ಮರಣೆ ಮಾಡುತ್ತಿವೆ. ಸರ್ಕಾರದ ಪ್ರಯತ್ನಗಳಲ್ಲಿ ಕೈಜೋಡಿಸುವ ಈ ಸಂಸ್ಥೆಗಳ ಉಪಕಾರಸ್ಮರಣೆಯನ್ನು ಸರ್ಕಾರ ಮಾಡುವುದು ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

ಹುಟ್ಟಿದ ಕೂಡಲೇ ಯಾರೂ ದೊಡ್ಡವರಾಗುವುದಿಲ್ಲ. ನಮ್ಮ ಪೋಷಕರು, ಗುರುಗಳು, ನಮ್ಮ ಸಮಾಜ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬೆಳವಣಿಗೆಗೆ ಕೊಡುಗೆ ನೀಡುತ್ತಾರೆ. ನಾವು ಬೆಳೆಯುವುದರೊಂದಿಗೆ ನಮ್ಮ ಸುತ್ತಮುತ್ತಲಿನವರನ್ನೂ ಬೆಳೆಸಬೇಕು. ಸಮಾಜಕ್ಕೆ ನಾವು ಪಡೆದುಕೊಂಡಿರುವುದರಲ್ಲಿ ಕಿಂಚಿತ್ತಾದರೂ ಹಿಂತಿರುಗಿಸಬೇಕು. ಆಗ ಬದುಕಿನ ಬ್ಯಾಲೆನ್ಸ್ ಶೀಟ್ ತಾಳೆಯಾಗುವುದು ಎಂದು ನುಡಿದರು.

ಉಚಿತವಾಗಿ ಲಸಿಕೆ ಒದಗಿಸುವ ಮೂಲಕ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಕೋವಿಡ್ ಸೋಂಕು ನಿಯಂತ್ರಿಸಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವರು ಹಾಗೂ ಭಾರತ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಸಿ.ಎಸ್.ಆರ್. ಉಪಕ್ರಮಗಳ ಅಧ್ಯಕ್ಷೆಯಾಗಿರುವ ಗೀತಾಂಜಲಿ ಕಿರ್ಲೋಸ್ಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಮುಖ್ಯಮಂತ್ರಿಯವರು, ಹಿಂದುಳಿದ ಜಿಲ್ಲೆಗಳಲ್ಲಿ ಮತ್ತು ಅಗತ್ಯವಿರುವ ಜಿಲ್ಲೆಗಳಲ್ಲಿ ಇಂತಹ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಮುಂದಾಗುವಂತೆ ಸಲಹೆ ನೀಡಿದರು. ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

ಇಂದು ಉದ್ಘಾಟಿಸಲಾದ ಕೋವಿಡ್ ಫೀಲ್ಡ್ ಆಸ್ಪತ್ರೆಗೆ ನೋಕಿಯ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಸ್ವಸ್ತಿ, ಮತ್ತಿತರ ಸಂಸ್ಥೆಗಳು ಸಹಕಾರ ನೀಡಿದ್ದವು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಪಿ.ಸಿ. ಮೋಹನ್, ಶಾಸಕ ಉದಯ್ ಗರುಡಾಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *