ಅಣ್ಣಾಮಲೈ 10 ವರ್ಷ ಬಿಟ್ಟು ರಾಜೀನಾಮೆ ನೀಡಿ- ಪಲಿಮಾರು ಸ್ವಾಮೀಜಿ

Public TV
1 Min Read

ಉಡುಪಿ: ದಕ್ಷ ಅಧಿಕಾರಿಯಾಗಿರುವ ಅಣ್ಣಾಮಲೈ ಕಾನೂನು ಸುವ್ಯವಸ್ಥೆ ನಿಭಾಯಿಸುವ ತಜ್ಞರು. ಹೀಗಾಗಿ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡುವಂತಾಗಲಿ ಎಂದು ಕೃಷ್ಣಮಠದ ಪರ್ಯಾಯ ಪಲಿಮಾರು ಮಠದ ಯತಿ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷ ನೇತಾರ ರಾಜಕೀಯಕ್ಕೆ ಹೋಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅಣ್ಣಾಮಲೈ ರಾಜಕೀಯ ಪ್ರವೇಶಕ್ಕೆ ನನ್ನ ವಿರೋಧ ಇಲ್ಲ. ಆದರೆ ಅವರು ಇನ್ನೂ ಹತ್ತು ವರ್ಷ ಪೊಲೀಸ್ ಸೇವೆ ಮಾಡಲಿ. ಇಷ್ಟು ಬೇಗ ರಾಜಕೀಯ ಪ್ರವೇಶ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ರಾಜಕೀಯದಲ್ಲಿ ಸೋಲು ಗೆಲುವಿಗೆ ಸಿದ್ಧವಾಗಿರಬೇಕು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿಯಾಗಿದ್ದಾರೆ. ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. 10 ವರ್ಷ ತಡವಾಗಿ ರಾಜಕೀಯಕ್ಕೆ ಸೇರಿ. ರಾಜಕೀಯಕ್ಕೆ ವಯಸ್ಸಿನ ಮಿತಿ ಇಲ್ಲ. ಆದರೆ ರಾಜಕೀಯ ಸೇರ್ಪಡೆಗೆ ನಿರ್ಧರಿಸಿದ್ದರೆ ಅದಕ್ಕೂ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

ಅಣ್ಣಾಮಲೈಗೆ ಎಲ್ಲಿ ಹೋದರೂ ಒಳ್ಳೆದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರಾಗಿದ್ದಾರೆ. ಪೊಲೀಸ್ ಇಲಾಖೆ ಬಿಡಬಾರದು ಎನ್ನುವುದು ನಮ್ಮ ಚಿಕ್ಕ ಆಸೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜೀನಾಮೆ:
ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತಮ್ಮ ಡಿಜಿ ಹಾಗೂ ಐಜಿಪಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಪತ್ರವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕೈಗಿತ್ತ ಅಣ್ಣಾಮಲೈ, ಹೆತ್ತವರು ಹಾಗೂ ವೈಯಕ್ತಿಕ ಜೀವನದ ಕಾರಣ ನೀಡಿದ್ದಾರೆ. ಆದರೆ ರಾಜಕೀಯ ಪ್ರವೇಶ ಬಗ್ಗೆ ನಾನು ಈಗಾಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಟ್ಟಿನಲ್ಲಿ ಸ್ವಲ್ಪ ದಿನ ಕುಟುಂಬದ ಜೊತೆ ಬೆರೆಯಬೇಕು. ಬೆಳೆಯುತ್ತಿರುವ ಮಗನಿಗೆ ಒಳ್ಳೆಯ ಅಪ್ಪನಾಗಿರಬೇಕು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *