ಕೊಡಗು: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಡೆದಿದೆ. ಅಪ್ಪ, ಮಗ ಹಾಗೂ ಸೊಸೆ ಮಂಗಳವಾರ ಸಂಜೆ ಮನೆಯೊಳಗೆ ನೇಣಿಗೆ ಶರಣಾಗಿದ್ದಾರೆ.
ಮಂಜುಳಾ(28), ಪ್ರದೀಪ್(32) ಹಾಗು ಗೋಪಾಲ್(64) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. 8 ತಿಂಗಳು ಹಿಂದೆ ಮಂಜುಳಾ ಅವರು ಪ್ರದೀಪ್ ಎಂಬವರೊಂದಿಗೆ ವಿವಾಹವಾಗಿದ್ದರು. ಮಂಜುಳಾ, ಪ್ರದೀಪ್ ಹಾಗೂ ಮಾವ ಒಂದು ಮನೆಯಲ್ಲಿ ವಾಸವಾಗಿದ್ದರು. ಆದರೆ ಮಂಜುಳಾ ಅವರ ಅತ್ತೆ ಹಾಗೂ ನಾದಿನಿ ಬೇರೊಂದು ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುಳಾ ನೇಣಿಗೆ ಶರಣಾದದನ್ನು ನೋಡಿದ ಪತಿ ಪ್ರದೀಪ್ ಹಾಗೂ ಮಾವ ಗೋಪಾಲಯ್ಯ ತಾವು ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುಳಾ ಸಾಯುವ ಮುನ್ನ ಪತ್ರವೊಂದನ್ನ ಬರೆದಿಟ್ಟಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ, ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಕ್ಷಮಿಸಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇಂತಿ ನಿಮ್ಮ ಪ್ರೀತಿಯ ಮಂಜುಳಾ ಎಂದು ಬರೆದಿದ್ದಾರೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.