ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ- ಮೃತ ಪ್ರಭುಧ್ಯಾ ತಾಯಿ ಗಂಭೀರ ಆರೋಪ

Public TV
1 Min Read

ಬೆಂಗಳೂರು: ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ಪ್ರಭುಧ್ಯಾ (Prabhudya) ತಾಯಿ ಸೌಮ್ಯ ಕಣ್ಣೀರು ಹಾಕುತ್ತಾ ಗಂಭೀರ ಆರೋಪ ಮಾಡಿದ್ದಾರೆ.

ಮಗಳ ಸಾವಿನ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗಳು ಆತ್ಮಹತ್ಯೆಗೆ ಶರಣಾಗುವ ಯುವತಿಯಲ್ಲ. ಪ್ರತಿದಿನ ಕಾಲೇಜಿಗೆ ಹೋದಾಗ ಕರೆ ಮಾಡಿ ಹೇಳುತ್ತಿದ್ದಳು. ಬುಧವಾರ ಮಧ್ಯಾಹ್ನ 1:30ರ ಸುಮಾರಿಗೆ ಫೋನ್ ಮಾಡಿ ಫ್ರೆಂಡ್ ಜೊತೆ ಪಾನಿಪುರಿ ತಿಂತಿದ್ದೀನಿ ಅಂದ್ಲು. ಆದರೆ ಮಧ್ಯಾಹ್ನ 3:30ರ ಸುಮಾರಿಗೆ ಹೀಗಾಗಿದೆ ಎಂದು ಕಣ್ಣೀರಿಟ್ಟರು.

ಮನೆಯ ಮೈನ್ ಡೋರ್ ಕ್ಲೋಸ್ ಆಗಿತ್ತು. ಹಿಂದಿನ ಡೋರ್ ತೆಗೆದಿತ್ತು. ಮೊದಲು ನೋಡಿದಾಗ ಮಗಳ ಮೊಬೈಲ್ ಇತ್ತು. ಆಮೇಲೆ ಮೊಬೈಲ್ ಇರಲಿಲ್ಲ. ಗಿಣಿ ಸಾಕಿದ ಹಾಗೆ ನನ್ನ ಮಗಳನ್ನ ಸಾಕಿದ್ದೆ. ಯಾರೋ ನನ್ನ ಮಗಳನ್ನ ಸಾಯಿಸಿದ್ದಾರೆಂದು ಸೌಮ್ಯಾ ಗೋಳಾಡಿದ್ದಾರೆ.

ಮೊಬೈಲ್ ಸೀಜ್: ಇನ್ನು ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಯುವತಿಯ ಮೊಬೈಲ್‍ನ್ನು ವಶಕ್ಕೆ ಪಡೆದು, ಎಲ್ಲಾ ಆಯಾಮದಲ್ಲೂ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾವಿನ ಸುತ್ತ ಅನುಮಾನ: ದ್ವಿತೀಯ ವರ್ಷದ ಪದವಿ ಓದುತ್ತಿದ್ದ 21 ವರ್ಷದ ಪ್ರಭುಧ್ಯಾ ತಮ್ಮ ಮನೆಯ ಬಾತ್ ರೂಂನಲ್ಲೇ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ನಿನ್ನೆ ಘಟನೆ ನಡೆದಿದ್ದು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಆದರೆ ಯುವತಿ ಅನುಮಾನಾಸ್ಪದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

Share This Article