ತಂದೆ ಎನ್ನುವುದನ್ನು ನೋಡದೆ ಕೇವಲ 900 ರೂ. ಆಸೆಗೆ ಕೊಂದೇ ಬಿಟ್ಟ!

Public TV
2 Min Read

ಮುಂಬೈ: ಆಸ್ತಿಗಾಗಿ ಮಕ್ಕಳು ತಂದೆ ಜೊತೆ ಜಗಳವಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಗ ಕೇವಲ 900 ರೂ. ಆಸೆಗೆ ತನ್ನ ತಂದೆಯನ್ನೆ ಕೊಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಫೆ.1 ರಂದು 35 ವರ್ಷದ ವ್ಯಕ್ತಿ ತನ್ನ ತಂದೆಯನ್ನು ಕ್ಷುಲ್ಲಕ ಕಾರಣಕ್ಕೆ ಥಳಿಸಿದ್ದು, ಆಸ್ಪತ್ರೆಗೂ ಕರೆದುಕೊಂಡು ಹೋಗದೆ ಕೊಂದಿದ್ದಾನೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ, ಆರೋಪಿಯು ತನ್ನ ತಂದೆಯಿಂದ ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಈ ಕೃತ್ಯ ಮಾಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

POLICE JEEP

ಏನಿದು ಘಟನೆ?
ಈ ಕೃತ್ಯ ಜಹಾರ್ ಪ್ರದೇಶದ ರಂಜನ್‍ಪಾಡಾದಲ್ಲಿ ನಡೆದಿದೆ. ಮೃತ ಜಾನು ಮಾಳಿ(70) ಅವರಿಗೆ ಸರ್ಕಾರದ ಯೋಜನೆಯಡಿ ಪ್ರತಿ ತಿಂಗಳು ಒಂದಷ್ಟು ಹಣ ಸಿಗುತ್ತಿತ್ತು. ಆಗ ಜಾನು ಯಾವುದೋ ಕೆಲಸಕ್ಕಾಗಿ ತನ್ನ ಬ್ಯಾಂಕ್ ಖಾತೆಯಿಂದ 900 ರೂಪಾಯಿ ಡ್ರಾ ಮಾಡಿದ್ದಾರೆ. ನಂತರ ಅವರ ಮಗ ರವೀಂದ್ರ ಮಾಲಿ ಅವರಿಂದ ಡ್ರಾ ಮಾಡಿದ ಹಣವನ್ನು ಕೇಳಲು ಪ್ರಾರಂಭಿಸಿದ್ದಾನೆ. ಆದರೆ ಜಾನು ಹಣ ನೀಡಲು ನಿರಾಕರಿಸಿದ್ದಾರೆ. ಇದಕ್ಕೆ ಕೋಪಕೊಂಡ ರವೀಂದ್ರ ತಂದೆ ಎನ್ನುವುದನ್ನು ನೋಡದೆ ಥಳಿಸಿದ್ದಾನೆ.

ಥಳಿಸಿದ ಕಾರಣ ಜಾನು ಅವರಿಗೆ ಗಂಭೀರವಾಗಿ ಗಾಯವಾಗಿದೆ. ರವೀಂದ್ರ ಅವರನ್ನು ಮೋಖ್ದಾ ಆಸ್ಪತ್ರೆಗೆ ಕರೆದೊಯ್ಯದಿದ್ದಾನೆ. ಆದರೆ ಅಲ್ಲಿ ವೈದ್ಯರು ನಿಮ್ಮ ತಂದೆ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ನಾಸಿಕ್‍ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ರವೀಂದ್ರ ತಂದೆಯನ್ನು ಆಸ್ಪತ್ರಗೆ ಕರೆದುಕೊಂಡು ಹೋಗುವ ಬದಲು ಮನೆಗೆ ಕರೆತಂದಿದ್ದಾನೆ. ಮರುದಿನ ಜಾನು ಮೃತಪಟ್ಟಿದ್ದಾರೆ. ಇದನ್ನೂ ಓದಿ:  ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

ವಿಷಯ ತಿಳಿದ ಕುಟುಂಬಸ್ಥರು ಪೊಲೀಸರಿಗೆ ಈ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ರವೀಂದ್ರನನ್ನು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಜಾನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಸ್ತುತ ಆರೋಪಿ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಂಪೂರ್ಣ ಮಾಹಿತಿ ತಿಳಿದ ತಕ್ಷಣ ಆರೋಪಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸರು ಭರವಸೆಯನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *