ಕೊಪ್ಪಳ: ಹಿಂದೆ ಕಾರ್ಯಕ್ರಮಗಳಲ್ಲಿ ಜನ ಮೋದಿ ಮೋದಿ ಎಂದು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುತ್ತಿದ್ದರು. ಈಗ ಮೋದಿ ಎಂದರೆ ಹೊಡೆತ್ತಾರೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಹೆಸರು ಹೇಳಿದರೆ ಮಹಿಳೆಯರೇ ಓಡಾಡಿಸಿ ಹೊಡೆಯುತ್ತಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿಯವರು ಲಸಿಕೆ ಅಭಿಯಾನ ಮಾಡುವುದಕ್ಕೆ ನಾಚಿಕೆಯಾಗಬೇಕು. ಲಸಿಕೆ ಹಾಕುವುದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದು ಸಾರ್ವಜನಿಕರ ಹಕ್ಕು. ಆದರೆ ಬಿಜೆಪಿಯವರು ಅಲ್ಲಿಯೂ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಮೋದಿ, ಬಿಜೆಪಿಯವರ ಸುಳ್ಳು ಹೇಳುವುದು ಜನರಿಗೆ ಈಗ ಅರ್ಥವಾಗಿದೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಚಾಲನೆ
ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈಗ 14 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದರೆ ಯುವಕರಿಗೆ ಉದ್ಯೋಗವಿಲ್ಲದೆ ನಿರುದ್ಯೋಗಿಯಾಗಿದ್ದಾರೆ. ಅದಕ್ಕಾಗಿಯೇ ನಿರುದ್ಯೋಗಿ ದಿನಾಚರಣೆ ಆಚರಿಸಲಾಗಿದೆ. ಹಿಂದುಗಳ ಹೆಸರು ಹೇಳಿಕೊಂಡು ಬಿಜೆಪಿಯವರು ರಾಜಕಾರಣ ಮತ್ತು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಹಿಂದು ದೇವಾಲಯಗಳ ಉಳಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ತಮ್ಮ ತಪ್ಪು ಮುಚ್ಚಿಕೊಳ್ಳಲು ತಹಶೀಲ್ದಾರ್ ವಿಚಾರಣೆಗಾಗಿ ನೋಟಿಸ್ ನೀಡುತ್ತಾರೆ. ಹಿರಿಯ ಅಧಿಕಾರಿಗಳಿಗೆ, ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಹಾಗಾದರೆ ಇವರ ಆಡಳಿತ ಹೇಗೆ ನಡೆದಿದೆ. ನಾವು ಹಿಂದುಗಳು ನೇರವಾಗಿ ಹಿಂದು ದೇವಾಲಯಕ್ಕೆ ಹೋಗುತ್ತೇವೆ. ಆದರೆ ಬಿಜೆಪಿಯವರು ಹಿಂಬಾಗಿಲಿನಲ್ಲಿ ದೇವಾಲಯ ಒಡೆಯುತ್ತಿದ್ದಾರೆ. ಹಿಂದು, ಮೋದಿ ಹೊಗಳುತ್ತಿದ್ದ ಸಿ.ಟಿ.ರವಿ, ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೇಲಿ ಎಲ್ಲಿ ಮಾಯವಾಗಿದ್ದಾರೆ? ಜನರಿಗೆ ಇವರು ಡೋಂಗಿ ಹಿಂದುಗಳು ಎಂಬುವುದು ಗೊತ್ತಾಗಿದೆ. ಇವರ ಆಟ ನಡೆಯುವುದಿಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.