ಇತಿಹಾಸ ಗೊತ್ತಿಲ್ಲದ ಸಿದ್ದರಾಮಯ್ಯರಿಂದ ಹುಚ್ಚು ಹುಚ್ಚು ಹೇಳಿಕೆ – ಈಶ್ವರಪ್ಪ

Public TV
1 Min Read

ಶಿವಮೊಗ್ಗ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ರಾಜಕೀಯ ನಾಯಕರುಗಳ ಮಧ್ಯೆ ಟಾಕ್ ವಾರ್ ನಡೆಯುತ್ತಿದ್ದು, ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಹೆಸರು ನಾಲಗೆಯಲ್ಲಿ ತರುವುದಕ್ಕೂ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ಸಾವರ್ಕರ್ ಬಗ್ಗೆ ಹೀಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಾವರ್ಕರ್ ಅವರನ್ನು ಬ್ರಿಟಿಷರು ಸರೋವರದಾಚೆ ಅಂಡಮಾನ್ ಜೈಲಿನಲ್ಲಿ ಇಟ್ಟಿದ್ದರು. ಆ ಜೈಲನ್ನು ಸಿದ್ದರಾಮಯ್ಯ ಒಂದು ಸಾರಿ ನೋಡಿಕೊಂಡು ಬರಲಿ. ಕಾಂಗ್ರೆಸ್ ನವರು ಬೇರೆ ಬೇರೆ ಕಾರಣಕ್ಕೆ ಜೈಲಿಗೆ ಹೋಗುತ್ತಿದ್ದಾರೆ, ಆದರೆ ಸಾವರ್ಕರ್ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋದವರು. ಸಾವರ್ಕರ್ ಇಂದಿಗೂ ಯುವಕರಿಗೆ ಸ್ಫೂರ್ತಿ. ಹೀಗಿರುವಾಗ ಇತಿಹಾಸ ಗೊತ್ತಿಲ್ಲದ ಸಿದ್ದರಾಮಯ್ಯ ಹುಚ್ಚು ಹುಚ್ಚಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದನ್ನು ಓದಿ: ಸಿಟಿ ರವಿ ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದ್ದಾರೆ ಅರ್ಥವಾಗಿಲ್ಲ- ಸಿದ್ದರಾಮಯ್ಯ

ಅಲ್ಲದೆ ಸಿದ್ದಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ಕೊಡಿ ಎಂದು ನಾವು ಹೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ನಾವು ಹೇಳಿದ ತಕ್ಷಣ ಅದನ್ನು ಮಾಡುವುದಿಲ್ಲ. ಭಾರತ ರತ್ನ ಯಾರಿಗೆ ಕೊಡಬೇಕು ಎನ್ನುವುದನ್ನು ಚಿಂತನೆ ನಡೆಸುತ್ತಿದೆ. ಸಿದ್ದಗಂಗಾ ಶ್ರೀಗಳಿಗೆ ಇಂದಲ್ಲಾ ನಾಳೆ ಭಾರತ ರತ್ನ ಸಿಗಲಿದೆ ಎಂದು ಇದೇ ವೇಳೆ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *