ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

Public TV
1 Min Read

ಉಡುಪಿ: ಜಿಲ್ಲೆಯ ಶ್ರೀಕೃಷ್ಣಮಠದ ಶೀರೂರು ಶ್ರೀ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಶ್ರೀಗಳ ಜೊತೆ ಮಾತನಾಡಿದ್ದಾರೆ. ಅಲ್ಲದೇ ಸಚಿವ ಮಧ್ವರಾಜ್ ಭೇಟಿ ಮಾಡೋದಾಗಿ ಹೇಳಿದ್ದಾರೆ.

ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡೋದು ದೊಡ್ಡ ಸುದ್ದಿಯಾಗಿದೆ. ಉಡುಪಿಯ ಉಪ್ಪೂರಿನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶೀರೂರು ಶ್ರೀಗಳ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು. ಇದನ್ನೂ ಓದಿ: ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

ಸ್ವಾಮೀಜಿ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಿಳಿದಿದ್ದೇನೆ. ಅವರ ಅಸಮಾಧಾನದ ಬಗ್ಗೆ ಶೀರೂರು ಶ್ರೀಗಳ ಜೊತೆ ಚರ್ಚೆ ಮಾಡುತ್ತೇನೆ. ನನಗೆ ಶೀರೂರು ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರಿಗೆ ಆಗಿರುವ ನೋವಿನ ಬಗ್ಗೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಹೇಳಿದರೆ ನಾನು ಖಂಡಿತಾ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಬಾರಿ ಉಡುಪಿಯಿಂದ ಸ್ಪರ್ಧಿಸುವುದಾಗಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನಿನ್ನೆ ಘೋಷಿಸಿದ್ದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಫೋನ್ ಮೂಲಕ ಮಾತುಕತೆ ಮಾಡಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಬಗ್ಗೆ ಶೀರೂರು ಶ್ರೀಗಳ ಅಸಮಾಧಾನವನ್ನು ವರಿಷ್ಠರು ಆಲಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಉದಯ ಕುಮಾರ್ ಶೆಟ್ಟಿ ಫೋನ್ ಮೂಲಕ ಉಭಯ ನಾಯಕರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿದ್ದರು. ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ಮುಖತಃ ಭೇಟಿಯಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *