ಚಾರ್ಮಾಡಿಯಲ್ಲಿ ಎಷ್ಟು ಹುಡುಕಾಡಿದರೂ ಸಿಗದ ಶರತ್ ಮೃತದೇಹ – ಬರಿಗೈಯಲ್ಲಿ ಬೆಂಗಳೂರು ಪೊಲೀಸರು ವಾಪಸ್

Public TV
2 Min Read

ಚಿಕ್ಕಮಗಳೂರು: ಕಳೆದ 3 ದಿನಗಳಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಬೆಂಗಳೂರಿನ (Bengaluru) ಯುವಕ ಶರತ್ (Sharath) ಮೃತದೇಹ ಹುಡುಕುತ್ತಿದ್ದ ಪೊಲೀಸರು (Bengaluru Police) ಶುಕ್ರವಾರ ಬರಿಗೈಯಲ್ಲಿ ವಾಪಾಸಾಗಿದ್ದಾರೆ. 10ಕ್ಕೂ ಹೆಚ್ಚು ಪೊಲೀಸರ ಜೊತೆ 20ಕ್ಕೂ ಹೆಚ್ಚು ಸ್ಥಳೀಯ ಯುವಕರು 3 ದಿನಗಳಿಂದ ನಿರಂತರವಾಗಿ ಹುಡುಕಿದರೂ ಶವ ಸಿಗದ ಹಿನ್ನೆಲೆ ಪೊಲೀಸರು ಮತ್ತೆ ಬರುವುದಾಗಿ ಹೇಳಿ ವಾಪಾಸಾಗಿದ್ದಾರೆ.

ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಸಬ್ಸಿಡಿ ದರದಲ್ಲಿ ಕಾರು ಕೊಡಿಸುತ್ತೇನೆ ಎಂದು ನಂಬಿಸಿ ಕೆಲವರಿಂದ ಹಣ ಪಡೆದಿದ್ದ. ಆದರೆ ಕಾರು ಕೊಡಿಸದ ಹಿನ್ನೆಲೆ ಹಣ ಕೊಟ್ಟವರು ಶರತ್‌ನನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೈದಿದ್ದರು. ಕೊಲೆಯ ಬಳಿಕ ಮೃತ ದೇಹವನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. 9 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಇದೀಗ ಬೆಳಕಿಗೆ ಬಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶರತ್ ಮೃತ ದೇಹಕ್ಕಾಗಿ 3 ದಿನಗಳಿಂದ ಶೋಧ ನಡೆಸಿದ್ದಾರೆ.

ಶರತ್ ಮೃತ ದೇಹವನ್ನು ಎಲ್ಲಿ ಎಸೆದಿದ್ದರು ಎಂದು ತಿಳಿದುಕೊಳ್ಳಲು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಆರೋಪಿಗಳು ಒಂದು ಬಾರಿ ರಸ್ತೆಯ ಎಡ ಭಾಗ ಎಂದರೆ, ಮತ್ತೊಂದು ಬಾರಿ ರಸ್ತೆಯ ಬಲಭಾಗ ಎನ್ನುತ್ತಿದ್ದರು. ಆರೋಪಿಗಳ ದ್ವಂದ್ವ ಹೇಳಿಕೆಯ ಮಧ್ಯೆಯೂ ಪೊಲೀಸರು ಅವರು ಹೇಳಿದ ಜಾಗದಲ್ಲೆಲ್ಲಾ ಹುಡುಕಾಡಿದ್ದಾರೆ. ಆದರೆ ಮೃತದೇಹ ಪತ್ತೆಯಾಗಿಲ್ಲ. 9 ತಿಂಗಳು ಕಳೆದಿರುವುದರಿಂದ ಪೊಲೀಸರಿಗೆ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಬೇಕಾದ ಹಿನ್ನೆಲೆ ಮೃತ ದೇಹವನ್ನು ಶೋಧಿಸುವ ಕಾರ್ಯಾಚರಣೆಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಬರಿಗೈಲಿ ಹಿಂದಿರುಗಿದ್ದಾರೆ.

ಸಾವಿರಾರು ಅಡಿ ಪ್ರಪಾತದ ಲಕ್ಷಾಂತರ ಹೆಕ್ಟರ್ ಅರಣ್ಯ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಮೃತದೇಹ ಹುಡುಕುವುದು ಕಲ್ಲನ್ನು ಗುದ್ದಿ ನೀರು ತೆಗೆದಂತೆ. ಅಲ್ಲಿ ಮೃತದೇಹ ಹುಡುಕುವುದು ಅಸಾಧ್ಯವೇ ಸರಿ. ಆದರೂ ಪೊಲೀಸರು 3 ದಿನಗಳ ಕಾಲ ನಿರಂತರವಾಗಿ ಹುಡುಕಿ ಶುಕ್ರವಾರ ಬೆಂಗಳೂರಿಗೆ ಬರಿಗೈಲಿ ವಾಪಾಸಾಗಿದ್ದಾರೆ. ಕೊಲೆ ನಡೆದು 9 ತಿಂಗಳು ಕಳೆದಿರುವುದರಿಂದ ಮೃತದೇಹ ಮಣ್ಣಲ್ಲಿ ಕರಗಿರುವ ಸಾಧ್ಯತೆಯೇ ಹೆಚ್ಚಿದೆ. ಅಲ್ಲದೇ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಹಾಗೂ ಸೀಳು ನಾಯಿಗಳು ಯಥೇಚ್ಛವಾಗಿವೆ. ಪ್ರಾಣಿಗಳು ತಿಂದಿರಬಹುದು. ಇದನ್ನೂ ಓದಿ: ಬೆಂಗಳೂರಿನ ನಾಗರಬಾವಿ ಬಳಿ ಚಿರತೆ ಹೆಜ್ಜೆ

ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತದೆ. ಇಲ್ಲಿ ಬಿದ್ದ ಮಳೆ ಚಾರ್ಮಾಡಿ ಘಾಟಿಯ ಕಣಿವೆಯಲ್ಲಿ ಹರಿದು ನೇತ್ರಾವತಿ ಸೇರುತ್ತದೆ. 2022ರಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಸುರಿದಿದೆ. ಮೃತದೇಹದ ಅವಶೇಷಗಳಿದ್ದರೂ ಕೂಡ ಮಳೆ ನೀರಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಕರ್ನಾಟಕ-ಕೇರಳ ಗಡಿಯಲ್ಲಿ ರಿಂಗಣಿಸಿ ಆತಂಕ ಸೃಷ್ಟಿಸಿದ ಸ್ಯಾಟಲೈಟ್ ಫೋನ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *