ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

Public TV
1 Min Read

ಹಾವೇರಿ: ಉಕ್ರೇನ್ ಯುದ್ಧದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆ ಚಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಭಾರತಕ್ಕೆ ರವಾನೆ ಆಗುತ್ತಿದೆ. ಸದ್ಯ ನವೀನ್ ಮೃತದೇಹ ದುಬೈನಲ್ಲಿದೆ. ನವೀನ್ ಮೃತದೇಹ ಹೊತ್ತ ವಿಮಾನ ದುಬೈನಿಂದ ಬೆಂಗಳೂರು ಕಡೆಗೆ ಹೊರಟಿದ್ದು, ನಸುಕಿನಜಾವ ಮೂರು ಗಂಟೆ ಸುಮಾರಿಗೆ ನವೀನ್ ಮೃತದೇಹ ಬೆಂಗಳೂರು ತಲುಪಲಿದೆ.


ಬೆಳಗ್ಗೆ ಒಂಬತ್ತು ಗಂಟೆಗೆಲ್ಲಾ ನವೀನ್ ಬಾಡಿಯನ್ನು ರಸ್ತೆ ಮಾರ್ಗವಾಗಿ ಹಾವೇರಿಯ ಚಳಗೇರಿಗೆ ಕೊಂಡೊಯ್ಯಲಾಗುತ್ತದೆ. ನವೀನ್ ಮೃತದೇಹವನ್ನು ಬರಮಾಡಿಕೊಳ್ಳಲು ಚಳಗೇರಿಯಿಂದ ಸಹೋದರ ಹರ್ಷ ಸೇರಿ 15 ಮಂದಿ ಬೆಂಗಳೂರಿಗೆ ಧಾವಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಅರುಣ್ ಕುಮಾರ್ ಪೂಜಾರ್ ಸೇರಿ ಹಲವು ಗಣ್ಯರು ನವೀನ್ ಮೃತದೇಹವನ್ನು ಬರ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ತೈಲ ಶಾಕ್ – ಡೀಸೆಲ್ ಬೆಲೆ ಲೀ.25 ರೂ. ಏರಿಕೆ

ಬಳಿಕ ಬೊಮ್ಮಾಯಿ ಚಳಗೇರಿಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ನವೀನ್ ಹುಟ್ಟೂರಿನಲ್ಲಿ ಅಂತಿಮ ವಿಧಿವಿಧಾನ ಪೂರೈಸಿದ ಬಳಿಕ ಕೆಲ ಹೊತ್ತು ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ಅಂತಿಮ ಮೆರವಣಿಗೆ ಮೂಲಕ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್‍ಎಸ್ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗುತ್ತದೆ. ವೈದ್ಯ ವಿದ್ಯಾರ್ಥಿಗಳ ಅಧ್ಯಯನದ ಸಲುವಾಗಿ ನವೀನ್ ಮೃತದೇಹವನ್ನು ಕಾಲೇಜ್‍ಗೆ ದಾನ ನೀಡಲು ಈಗಾಗಲೇ ಶೇಖರಪ್ಪ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

ರಷ್ಯಾ-ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ ಬಲಿಯಾಗಿದ್ದರು. ಖಾರ್ಕಿವ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದರು. ಖಾರ್ಕಿವ್‌ನಲ್ಲಿ  ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ಶೆಲ್‌ ದಾಳಿಗೆ ನವೀನ್ ದುರ್ಮರಣಕ್ಕೀಡಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *