ಬೆಂಗಳೂರಲ್ಲಿ ಕಳ್ಳತನ ಮಾಡಿದವನನ್ನೇ ದರೋಡೆ ಮಾಡಿದ ಗ್ಯಾಂಗ್

1 Min Read

– ಚಿನ್ನಾಭರಣ ಕೊಟ್ಟು ದರೋಡೆಕೋರರಿಂದಲೇ 3,000 ರೂ. ಹಣ ಪಡೆದ ಕಳ್ಳ
– ಕುಡಿದು ಬಂದು ಮತ್ತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು: ಕಳ್ಳತನ ಮಾಡಿ ಕೈತುಂಬಾ ಸಿಕ್ಕ ಹಣ, ಒಡವೆ ಕದ್ದು ಹೋಗುತ್ತಿದ್ದವನ ಅಡ್ಡಗಟ್ಟಿ ದರೋಡೆಕೋರರ ಗುಂಪೊಂದು ಕದ್ದಿದ್ದ ಚಿನ್ನಾಭರಣವನ್ನೇ ದೋಚಿದೆ.

ಇಸಾಯಿ ರಾಜ್ (26) ಎಂಬ ಕಳ್ಳ ರಾತ್ರಿ ಹೊತ್ತಲ್ಲಿ ವಿಲ್ಲಾದಲ್ಲಿ ಕಳ್ಳತನ ಮಾಡಿದ್ದ. ವೈಟ್‌ಫೀಲ್ಡ್ ಬಳಿಯ ಪ್ರೆಸ್ಟೀಜ್ ಗ್ಲೇನ್ ಪುಡ್ ವಿಲ್ಲಾಸ್ ಬಳಿಯಲ್ಲಿರುವ ವಿಲ್ಲಾದಲ್ಲಿ 300 ಗ್ರಾಂನಷ್ಟು‌ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗ್ತಿದ್ದ. ಮಂಡೂರು ಬಳಿ ಎಣ್ಣೆ ಹೊಡೆಯುತ್ತಾ ಕೂತಿದ್ದ ನಟೋರಿಯಸ್ ಗ್ಯಾಂಗ್ ಇಸಾಯಿಲ್‌ ರಾಜ್‌ನನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಇದನ್ನೂ ಓದಿ: ಸಿಸಿಬಿ ಪೊಲೀಸರ ಬೇಟೆ – ಹೊಸ ವರ್ಷಕ್ಕೆ ತಂದಿದ್ದ 4.20 ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ

ಮೌನೇಶ್ ರಾವ್, ದರ್ಶನ್ ಅಲಿಯಾಸ್ ಅಪ್ಪು, ಚಂದನ್, ಸುನಿಲ್ ಎಣ್ಣೆ ಹೊಡೆಯುತ್ತ ಇಸಾಯಿ ರಾಜ್‌ನ ನೋಡಿ ಆತನನ್ನ ಅಡ್ಡಗಟ್ಟಿದರು. ಈ ವೇಳೆ ಇಸಾಯಿ ರಾಜ್‌ನ ಹೆದರಿಸಿ ಆತನ ಬಳಿಯಲ್ಲಿದ್ದ ಚಿನ್ನ ದೋಚಿದ್ದಾರೆ. ಈ ವೇಳೆ ದರೋಡೆಕೋರರನ್ನು ಕಾಡಿಬೇಡಿ ತಮಿಳುನಾಡಿಗೆ‌ ಹೋಗಬೇಕು ಅಂತ ಇಸಾಯಿ ರಾಜ್ ಮೂರು‌ ಸಾವಿರ ಹಣ ಪಡೆದುಕೊಂಡು ಹೋಗಿದ್ದ . ಆದರೆ, ತಮಿಳುನಾಡಿಗೆ ಹೋಗದೇ ಅದೇ ಹಣದಲ್ಲಿ ಮತ್ತೆ ಎಣ್ಣೆ ಹೊಡೆದು, ಮತ್ತೆ 10 ಗಂಟೆಯ ನಂತರ ಎರಡು ಕಡೆ ಮನೆಕಳ್ಳತನ ಮಾಡಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅವಲಹಳ್ಳಿ ಪೊಲೀಸರು ತನಿಖೆ ನಡೆಸಿ ಇಸಾಯಿ ರಾಜ್ ಮತ್ತು ಆತನಿಂದ ರಾಬರಿ ಮಾಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 70 ಲಕ್ಷ ಬೆಲೆಬಾಳುವ 447 ಗ್ರಾಂ ವಜ್ರ ಮತ್ತು ಚಿನ್ನಾಭರಣ, ಜೊತೆಗೆ 28 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಲಂಚ ತೆಗೆದುಕೊಂಡಿದ್ದಕ್ಕೆ ಮಾಜಿ ಜನರಲ್‌ ಮ್ಯಾನೇಜರ್‌ನ ಗಲ್ಲಿಗೇರಿಸಿದ ಚೀನಾ

Share This Article