– IAS ಅಧಿಕಾರಿಗಳಿಗೆ ಎಕ್ಸಿಕ್ಯುಟಿವ್ ಕ್ಲಬ್ಗಾಗಿ ಐತಿಹಾಸಿಕ ವೈಮಾನಿಕ ಶಾಲೆಯ ಜಾಗ: ಅಶೋಕ್
ಬೆಂಗಳೂರು: ಬೆಂಗಳೂರಿನ ಜಕ್ಕೂರಿನಲ್ಲಿರುವ ಐತಿಹಾಸಿಕ ಫ್ಲೈಯಿಂಗ್ ಸ್ಕೂಲ್ನ (Jakkur Flying School) ಜಾಗವನ್ನು ಸರ್ಕಾರವೇ ಕಬಳಿಸಿ ರಿಯಲ್ ಎಸ್ಟೇಟ್ನವರಿಗೆ (Real Estate) ಕೊಡಲು ಮುಂದಾಗಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಗಂಭೀರ ಆರೋಪ ಮಾಡಿದ್ದಾರೆ.
ಸದನದಲ್ಲಿ ಮಾತಾಡಿದ ಅಶೋಕ್, ಜಕ್ಕೂರಿನಲ್ಲಿರುವ ಫ್ಲೈಯಿಂಗ್ ಸ್ಕೂಲ್ಗೆ ಮೈಸೂರು ಮಹಾರಾಜರು 217 ಎಕರೆ ಜಾಗ ಕೊಟ್ಟಿದ್ರು. ಆಗಿನ ಪ್ರಧಾನಿ ನೆಹರೂ ಅವರು ಪೈಲಟ್ ತರಬೇತಿ ಕೊಡುವ ಈ ಫ್ಲೈಯಿಂಗ್ ಸ್ಕೂಲ್ ಉದ್ಘಾಟನೆ ಮಾಡಿದರು. ಮಧ್ಯಮ ವರ್ಗದ ಮಕ್ಕಳು ಓದಿ ಪೈಲಟ್ ಆಗ್ಲಿ ಅಂತ ಈ ಶಾಲೆ ತೆರೆದಿರೋದು. ಅಂಥ ಪಾರಂಪರಿಕ ಜಾಗದ ಮೇಲೆ ಈಗ ಡಿಸಿಎಂ ಡಿಕೆಶಿ ಕಣ್ಣು ಬಿದ್ದಿದೆಯಾ ಅಂತ ಅನುಮಾನ ಬಂದಿದೆ. ಜಮೀನು ಕೊಟ್ಟಿದ್ದು ಮಹಾರಾಜರು, ಕಲ್ಲಿಟ್ಟು ಉದ್ಘಾಟಿಸಿದ್ದು ನೆಹರೂ, ಈಗ ಕಲ್ಲು ಕಿತ್ತು ಹಾಕಲು ಹೊರಟಿರೋದು ಡಿಕೆಶಿ ಅಂತ ಅಶೋಕ್ ಆರೋಪ ಮಾಡಿದರು. ಇದು ಅರಣ್ಯ ಭೂಮಿ. ಇಲ್ಲಿ ಸರ್ಕಾರ ಐಎಎಸ್ ಅಧಿಕಾರಿಗಳಿಗೆ ಎಕ್ಸಿಕ್ಯೂಟಿವ್ ಕ್ಲಬ್ ಮಾಡಲು ಹೊರಟಿದೆ ಎಂದು ಆರೋಪಿಸಿದ ಅಶೋಕ್, ಇಲ್ಲಿ ಕ್ಲಬ್ ಬಂದರೆ ಸುತ್ತಮುತ್ತ ಎತ್ತರದ ಕಟ್ಟಡಗಳು ತಲೆ ಎತ್ತಲಿವೆ. ರಿಯಲ್ ಎಸ್ಟೇಟ್ನವರಿಗೆ ಅನುಕೂಲ ಆಗಲಿದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಟ್ರಂಪ್ ಕಾಲ್ – ಮಧ್ಯಪ್ರಾಚ್ಯ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಮಹತ್ವದ ಮಾತುಕತೆ
ಈ ವೇಳೆ ಆರ್ ಅಶೋಕ್ ಆರೋಪಕ್ಕೆ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ ಕೊಟ್ಟರು. ಫ್ಲೈಯಿಂಗ್ ಸ್ಕೂಲ್ನಲ್ಲಿ ಪೈಲಟ್ ತರಬೇತಿಗೆ ಬರೋರು ಬಹಳ ಕಡಿಮೆ. ಅಲ್ಲಿ ಫ್ಲೈಓವರ್ ಇದೆ ಅಂತ ಡಿಜಿಸಿಎನವರು ಫ್ಲೈಯಿಂಗ್ಗೆ ಅನುಮತಿ ಕೊಡುತ್ತಿಲ್ಲ. ಹಾಗಾಗಿ ಈ ಫ್ಲೈಯಿಂಗ್ ಕ್ಲಬ್ ಅನ್ನು ಮೈಸೂರಿಗೆ ಶಿಫ್ಟ್ ಮಾಡುವ ಪ್ರಸ್ತಾಪ ಇದೆ. ಆ ಜಾಗದಲ್ಲಿ ದೊಡ್ಡ ಕ್ರೀಡಾ ಸಂಕೀರ್ಣ ಮಾಡೋ ಚರ್ಚೆ ಇದೆ ಅಂತ ಕೆಜೆ ಜಾರ್ಜ್ ಹೇಳಿದರು. ಮುಂದುವರೆದು, ಬೆಂಗಳೂರು ನಗರಕ್ಕೆ ದೊಡ್ಡ ಕ್ರೀಡಾ ಸಂಕೀರ್ಣ ಬೇಕು. ಕ್ರೀಡಾ ಸಂಕೀರ್ಣ ಮಾಡಲು ಅದು ಸೂಕ್ತ ಜಾಗ. ಫ್ಲೈಯಿಂಗ್ ಕ್ಲಬ್ನಲ್ಲಿರುವ 40 ಜನರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಡುತ್ತೇವೆ. ಬೆಂಗಳೂರಿಗೆ ಕ್ರಿಕೆಟ್, ಫುಟ್ಬಾಲ್ ಮತ್ತಿತರ ಕ್ರೀಡೆಗಳಿಗೆ ಸ್ಪೋರ್ಟ್ಸ್ ಕ್ಲಬ್ ಬೇಕು. ಅದು ಸೂಕ್ತ ಜಾಗ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಇದರ ನಿರ್ಧಾರ ಇನ್ನೂ ಆಗಿಲ್ಲ, ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಬಿಲ್ಡರ್ಗಳಿಗೆ ಅನುಕೂಲ ಆಗಲಿ ಅಂತ ಇದನ್ನ ನಾವು ಮಾಡುತ್ತಿಲ್ಲ ಎಂದು ಜಾರ್ಜ್ ಸ್ಪಷ್ಟನೆ ಕೊಟ್ಟರು. ಇದನ್ನೂ ಓದಿ: ಅಮೆರಿಕ ವಿನಾಯ್ತಿ ಬೆನ್ನಲ್ಲೇ ಇರಾನ್ನಿಂದ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ರಿಲಯನ್ಸ್
ಈ ವೇಳೆ ಮತ್ತೆ ಮಾತಾಡಿದ ಅಶೋಕ್, ಫ್ಲೈಯಿಂಗ್ ಸ್ಕೂಲ್ ಜಾಗದಲ್ಲಿ ಏನೂ ಮಾಡಬಾರದು, ಅದನ್ನು ಒಂದು ಪಾರಂಪರಿಕ ಕಟ್ಟಡ ಅಂತ ಪರಿಗಣಿಸಿ ಉಳಿಸಿ. ಕ್ರೀಡಾ ಸಂಕೀರ್ಣ ಕಟ್ಟೋದಾದರೆ ಬೇರೆ ಕಡೆ ಕಟ್ಟಿ. ಫ್ಲೈಯಿಂಗ್ ಸ್ಕೂಲ್ ಜಾಗವೇ ಬೇಕೇ? ಈ ಜಾಗ ರಿಯಲ್ ಎಸ್ಟೇಟ್ನವರಿಗೆ ಡೀಲ್ ಆಗಿದೆ ಅನ್ನೋ ಆರೋಪ ಇದೆ. ಯಾಕೆ ಬೇಕು ಸರ್ಕಾರಕ್ಕೆ ಈ ಡೀಲ್? ಈ ಡೀಲ್ ಹಿಂದೆ ದೊಡ್ಡ ಲಾಬಿ ಇದೆ, ಇದರ ಹಿಂದೆ ದೊಡ್ಡದೊಡ್ಡವರು ಇದ್ದಾರೆ, ಅಲ್ಲಿ ಅಧಿಕಾರಿಗಳ ಜಾಗದಲ್ಲಿ ದೊಡ್ಡವರೊಬ್ಬರು ಕೂರ್ತಾರೆ, ನಾನು ಅವರ ಹೆಸರು ಹೇಳಲ್ಲ. ರಾಜಸ್ಥಾನದಿಂದ ಯಾರೋ ಒಬ್ರು ಡೆವಲಪರ್ ಬರುತ್ತಾರಂತೆ ಇದಕ್ಕಾಗಿ. ಅದಕ್ಕೇ ಇಲ್ಲಿಂದ ಶಿಫಾರಸು ಮಾಡಿ ಅ ದೊಡ್ಡ ವ್ಯಕ್ತಿ, ಪದೇಪದೇ ಕೇಂದ್ರಕ್ಕೆ ಪತ್ರ ಬರೀತಾರಂತೆ. ಡಿಕೆಶಿ ಗಮನಕ್ಕೆ ಬರದೇ ಕೆಲವು ವಿಚಾರ ನಡೀತವೆ, ಅದು ದೊಡ್ಡ ರೇಡಾರ್ ಅಂತ ಅಶೋಕ್ ಕಾಲೆಳೆದರು. ಇದನ್ನೂ ಓದಿ: ಮುಂದಿನ 3 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ
ಈ ವೇಳೆ, ಸುನೀಲ್ ಕುಮಾರ್ ಎದ್ದು, ಡಿಕೆಶಿ ಅವರೇ ದೊಡ್ಡ ರೇಡಾರ್, ಅವರಿಗೂ ಸಿಗದ ರೇಡಾರ್ ಇನ್ನೆಷ್ಟು ದೊಡ್ಡದಿರಬಹುದು ಎಂದು ಟಾಂಗ್ ಕೊಟ್ಟರು. ಮತ್ತೆ ಡಿಕೆಶಿ ಮೇಲೆ ಆರೋಪಿಸಿದ ಅಶೋಕ್, ಏರ್ಪೋರ್ಟ್ಗಳ ಸುತ್ತಮುತ್ತಲ ಕಟ್ಟಡಗಳ ಎತ್ತರ ಮಿತಿ ಪರಿಶೀಲಿಸಿ ಅಂತ ಡಿಕೆಶಿ ಇತ್ತೀಚೆಗೆ ಕೇಂದ್ರದ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಕೇಳಿಕೊಂಡಿದ್ದಾರೆ. ಇದರಲ್ಲಿ ಜಕ್ಕೂರು ಇದೆಯಾ, ಜಕ್ಕೂರು ವಿಚಾರ ಗಮನದಲ್ಲಿಟ್ಟುಕೊಂಡು ಡಿಕೆಶಿ ಕೇಳಿದ್ದಾರಾ, ಇದರ ಸ್ಪಷ್ಟತೆ ಬೇಕು ಎಂದು ಅಶೋಕ್ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ್ಯಾಪರ್ ಬಾದ್ಶಾ ಎರಡನೇ ಮದುವೆ
ಆಗ ಡಿಸಿಎಂ ಡಿಕೆಶಿ ಮಾತಾಡಿ, ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ನಿಜ. ಇಡೀ ದೇಶದಲ್ಲಿ ಒಂದು ಮಾದರಿ ಇದೆ, ನಮ್ಮಲ್ಲೊಂದು ಮಾದರಿ ಇದೆ. ಈಗ ಕಟ್ಟಡಗಳ ಎತ್ತರಕ್ಕೆ ಪ್ರೀಮಿಯಂ ಎಫ್ಎಆರ್ ಮಾಡಿದ್ದೇವೆ. ಏರ್ಪೋರ್ಟ್ ಅಕ್ಕಪಕ್ಕ ಪ್ರೀಮಿಯರ್ ಎಫ್ಎಆರ್ ಮಾಡಿದ್ದೇವೆ. ಅದರಿಂದ ನಗರಕ್ಕೆ ಆದಾಯವೂ ಬರುತ್ತೆ. ದೇಶದಲ್ಲಿ ಏನಿದೆಯೋ ನಮಗೂ ಮಾಡಿಕೊಡಿ ಅಂತ ಕೇಳಿದ್ದೇವೆ. ಈ ವೇಳೆ ಅವರ ಜೊತೆ ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಶಿಫ್ಟ್ ಬಗ್ಗೆ ಹೇಳಿಲ್ಲ. ಜಕ್ಕೂರು ವಿಚಾರ ಪ್ರಸ್ತಾಪ ಮಾಡಿಲ್ಲ, ಅದು ಸಂಬಂಧವೂ ಪಟ್ಟಿಲ್ಲ. ಫ್ಲೈಯಿಂಗ್ ಸ್ಕೂಲ್ ಬಗ್ಗೆ ಸದ್ಯಕ್ಕೆ ನಾವು ಯಾವ ವಿಚಾರವೂ ಚರ್ಚೆ ಮಾಡುತ್ತಿಲ್ಲ ಎಂದು ಸದನದಲ್ಲಿ ಡಿಕೆಶಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಾರತದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ – ರಾಷ್ಟ್ರಕ್ಕೆ ಮೋದಿ ಅಭಯ
ಫ್ಲೈಯಿಂಗ್ ಸ್ಕೂಲ್ ಜಾಗವನ್ನು ಹೇಗೆ ಖಾಸಗಿಯವರಿಗೆ ಮಾಡಿಕೊಡಲು ಆಗುತ್ತೆ? ಯಾವ ಸರ್ಕಾರವೂ ಹಾಗೆ ಯೋಚಿಸಲ್ಲ, ನಮಗೆ ಆ ಯೋಚನೆ ಇಲ್ಲ. ಜಾರ್ಜ್ ಅವರು ಹೇಳಿದ ಹಾಗೆ ಅಲ್ಲಿ ಸ್ಟೇಡಿಯಂ ಅಥವಾ ಭಾರತ್ ಮಂಟಪ್ ಥರದ ಕಟ್ಟಡ ಕಟ್ಟುವ ಯೋಚನೆಗಳು ನಡೀತಿದೆ. ಇನ್ನೂ ಯಾವುದೂ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಶಿವಲಿಂಗೇಗೌಡ VS ರಾಯರೆಡ್ಡಿ ಇಂಗ್ಲೀಷ್ ವಾರ್

