ರಮೇಶ್ ತಲೆ ಮೊಬೈಲ್ ಇದ್ದಂತೆ, ಯಾವಾಗ ಬೇಕಾದ್ರೂ ಹ್ಯಾಂಗ್ ಆಗುತ್ತೆ: ಸತೀಶ್

Public TV
2 Min Read

– ಸಚಿವನಾಗಲು ಲಕ್ಷ್ಮಿ ಕಾಲು ಹಿಡಿದಿದ್ದ ರಮೇಶ್

ಬೆಳಗಾವಿ: ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗೋಕಾಕ್ ನಲ್ಲಿ ಸಹೋದರರ ಮುನಿಸು ಜೋರಾಗಿದೆ. ರಮೇಶ್ ಜಾರಕಿಹೊಳಿ ತಲೆ ಮೊಬೈಲ್ ಇದ್ದಹಾಗೆ. ಅದು ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ರಮೇಶ್ ನ ಮಂತ್ರಿ ಮಾಡಿದರು. ಹೆಬ್ಬಾಳ್ಕರ್ ಕೈಕಾಲು ಬಿದ್ದು, ಅತ್ತು ಮಂತ್ರಿಯಾಗಿದ್ದನು. ಲಕ್ಷ್ಮಿ ಹೆಬ್ಬಾಳ್ಕರ್ ಪವರ್ ಫುಲ್ ಇಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ. ಈ ಕಾರಣದಿಂದ ನಾನು ಲಕ್ಷ್ಮಿ ಜೊತೆಗೆ ಜಗಳ ಆಡಿದ್ದೆ. ಡಿಕೆಶಿ, ಹೆಬ್ಬಾಳ್ಕರ್ ಗೋಕಾಕ್ ಪ್ರಚಾರಕ್ಕೆ ಬರಲಿದ್ದಾರೆ. ರಮೇಶ್ ಮಂತ್ರಿ ಮಾಡಿದ್ದು ಹೇಗೆ ಎಂದು ಅವರೇ ಹೇಳಲಿದ್ದಾರೆ. ಯಡಿಯೂರಪ್ಪನನ್ನು ರಮೇಶ್ ಯಾವ ಗುಂಡಿಯಲ್ಲಿ ಹಾಕುತ್ತಾನೆ ಗೊತ್ತಿಲ್ಲ ಎಂದು ಹೇಳಿದರು.

25 ವರ್ಷ ರಮೇಶ್ ಜಾರಕಿಹೊಳಿ ಸಹ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಈ ಸಂಸ್ಕೃತಿ ಇದೆ. ಕೈಚೀಲ ಹಿಡಿಯೋದು ಅಂದರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ್ ಜಾರಕಿಹೊಳಿ ಶಂಕ್ರಾನಂದ್ ಕೈಚೀಲ ಹಿಡಿದು ಓಡಾಡಿದನು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಗ್ರೂಪ್‍ನಲ್ಲಿ ಇದ್ದವರು. ಆ ನಂತರ ಸಮಸ್ಯೆ ಆಗಿ ರಮೇಶ್ ಹೊರ ಬಂದಿದ್ದಾನೆ ಎಂದರು.

ಷೇರ್ ಮಾರ್ಕೆಟ್ ರೀತಿ ರಮೇಶ್ ಜಾರಕಿಹೊಳಿ ಅಪ್ ಅಂಡ್ ಡೌನ್ ಆಗ್ತಾನೆ. ರಮೇಶ್ ಮೊದಲು ಕೆ.ಎಚ್ ಪಾಟೀಲ್, ಎಸ್ ಎಂ ಕೃಷ್ಣ ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಅಂತ ಹೇಳಿದನು. ಎರಡು ವರ್ಷಗಳ ಹಿಂದೆ ಡಿಕೆ ಶಿವಕುಮಾರ್ ನನ್ನು ಸಿಎಂ ಮಾಡಲು ಹೊರಟಿದ್ದನು. ತನಗೆ ಹೇಗೆ ಬೇಕು ಹಾಗೆಯೇ ಬದಲಾವಣೆ ಆಗುತ್ತಾನೆ. ಸುಳ್ಳು ಹೇಳುವುದರಲ್ಲಿ ರಮೇಶ್‍ಗೆ ಪಿಎಚ್‍ಡಿ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

ಇದೇ ವೇಳೆ ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ರಮೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್, ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಬೆನ್ನಿಗೆ ರಮೇಶ್ ಚೂರಿ ಹಾಕಿದ್ದಾನೆ. ಲಖನ್ ಕಾಂಗ್ರೆಸ್ಸಿನಲ್ಲಿ ಇದ್ರು ಈಗಲೂ ಕಾಂಗ್ರೆಸ್ಸಿನಲ್ಲಿಯೇ ಇದ್ದಾರೆ. ಕಾಶಿಯಲ್ಲಿ ಅರ್ಧ ತಲೆ ಬೋಳಿಸಿದ ಹಾಗೆಯೇ ರಮೇಶ್ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸೇರೋ ಹಿಂದಿನ ರಾತ್ರಿ ನಿದ್ದೆಯೇ ಮಾಡಿಲ್ಲ- ಸತ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನು ಮುಂದೆ ಹೋಗುತ್ತೇನೆ. ಗೋಕಾಕ್ ಉಸ್ತುವಾರಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಇದ್ದಾರೆ. ಹೀಗಾಗಿ ಚಹಾ, ಊಟಕ್ಕೆ ಇನ್ನು ಮುಂದೆ ಹೋಗುತ್ತೇನೆ. ರಮೇಶ್ ನನ್ನು ಸಚಿವನನ್ನಾಗಿ ಮಾಡಿದ್ದಕ್ಕೆ ನಾನು ಲಕ್ಷ್ಮಿಯನ್ನು ವಿರೋಧಿಸಿದೆ. ಲಕ್ಷ್ಮಿ, ಡಿಕೆಶಿ ನನ್ನ ನಡುವೆ ಯಾವುದೇ ಜಗಳ ಇಲ್ಲ. ಹುಚ್ಚನನ್ನು ಮಂತ್ರಿ ಮಾಡಿದರು ಅಂತ ಜಗಳ ಇತ್ತು ಅಷ್ಟೇ. ನಾನು, ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಚೆನ್ನಾಗಿಯೇ ಇದ್ದೇವೆ. ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಸ್ವಾರ್ಥಿ. ಹೀಗಾಗಿ ಆತನನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಈಗನೂ ಮಾಡುತ್ತೇನೆ ಮುಂದೆಯೂ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

Share This Article
Leave a Comment

Leave a Reply

Your email address will not be published. Required fields are marked *