ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಒಡತಿಗೆ ಬೆಂಕಿ ಹಚ್ಚಿ, ತಾನೂ ಕೂಡ ಸತ್ತ

Public TV
1 Min Read

ಮುಂಬೈ: ಕೆಲಸದಿಂದ ತೆಗೆದು ಹಾಕಿದ 35 ವರ್ಷದ ಮಹಿಳೆಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ, ನಂತರ ತಾನೂ ಕೂಡ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಪುಣೆಯ ಸೋಮನಾಥ ನಗರದಲ್ಲಿ ಮಹಿಳೆ ಟೈಲರಿಂಗ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಮಿಲಿಂದ್ ನಾಥಸಾಗರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, 32 ವರ್ಷದ ಬಾಲಾ ಜಾನಿಂಗ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಎಂಟು ದಿನಗಳ ಹಿಂದೆ ಮಿಲಿಂದ್ ನಾಥಸಾಗರ್‍ನನ್ನು ಬಾಲಾ ಜಾನಿಂಗ್ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಕೋಪಗೊಂಡ ನಾಥಸಾಗರ್ ರಾತ್ರಿ 11 ಗಂಟೆ ಸುಮಾರಿಗೆ ಅಂಗಡಿಗೆ ತೆರಳಿ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ನಾಥಸಾಗರ್‍ಗೆ ಕೂಡ ಬೆಂಕಿ ಹೊತ್ತಿಕೊಂಡಿದ್ದು, ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪಾರ್ಟಿಗೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಾರ್ ಬೌನ್ಸರ್

CRIME 2

ಸದ್ಯ ಮಹಿಳೆಗೆ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಘಟನೆಯಲ್ಲಿ ಸಮೀಪದಲ್ಲಿಯೇ ಮೊಬೈಲ್ ಅಂಗಡಿ ಇಟ್ಟಿದ್ದ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಸ್ಥಳಕ್ಕೆ ಧಾವಿಸಿದಾಗ ಆತನಿಗೂ ಬೆಂಕಿ ತಗುಲಿದ್ದು, ಶೇ.35 ರಷ್ಟು ಸುಟ್ಟ ಗಾಯಗಳಾಗಿದೆ. ಇದೀಗ ಈತ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಂದನ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸುನೀಲ್ ಜಾಧವ್ ತಿಳಿಸಿದ್ದಾರೆ.

ಇದೀಗ ಮೃತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ರು ಸಮನ್ಸ್ ನೀಡಿದ್ದಕ್ಕೆ ಪ್ರಿಯಕರನೊಂದಿಗೆ ಬಾಲಕಿ ಆತ್ಮಹತ್ಯೆ

Share This Article
Leave a Comment

Leave a Reply

Your email address will not be published. Required fields are marked *