ಬೆಂಗಳೂರಿಗೆ ಮೋದಿ – 3 ಐತಿಹಾಸಿಕ ಕಾರ್ಯಕ್ರಮಕ್ಕೆ ನಮೋ ಸಾಕ್ಷಿ

Public TV
3 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಇಂದು ಬೆಂಗಳೂರಿನಲ್ಲಿ ಹವಾ ಎಬ್ಬಿಸಲಿದ್ದಾರೆ. 3 ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿ ಅಗುತ್ತಿದ್ದು, ಮೋದಿ ಆಗಮನಕ್ಕೆ ಬೆಂಗಳೂರು (Bengaluru) ಸಿದ್ಧವಾಗಿದೆ.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸುತ್ತಿರೋ ಪ್ರಧಾನಿ, ಇಡೀ ದಿನ ಬೆಂಗಳೂರಿನಲ್ಲಿ ಅಬ್ಬರಿಸಲಿದ್ದಾರೆ. ಪ್ರಮುಖವಾಗಿ 3 ಐತಿಹಾಸಿಕ ಕಾರ್ಯಕ್ರಮಗಳಿಗೆ ನಮೋ ಸಾಕ್ಷಿಯಾಗಲಿದ್ದಾರೆ. ಕೆಂಪೇಗೌಡ ಪ್ರತಿಮೆ ಅನಾವರಣ, ಟರ್ಮಿನಲ್ 2 ಉದ್ಘಾಟನೆ, ವಂದೇ ಭಾರತ್ ರೈಲು (Vande Bharat Train) ಉದ್ಘಾಟನೆ ಮಾಡಲಿದ್ದಾರೆ.

ಕೆಂಪೇಗೌಡ ಪ್ರತಿಮೆ (KempeGowda Statue) ವಿಶೇಷತೆಗಳೇನು!?: ಪ್ರತಿಮೆ ಸಂಪೂರ್ಣವಾಗಿ ಕಂಚಿನಿಂದ ತಯಾರಿಸಲಾಗಿದೆ. ಪ್ರತಿಮೆ ನಿರ್ಮಾಣದ ಕೆಲಸಕ್ಕೆ ಸುಮಾರು 64 ಕೋಟಿ ಖರ್ಚು ಮಾಡಲಾಗಿದೆ. 108 ಅಡಿಯ ಪ್ರತಿಮೆಗೆ ಪ್ರಗತಿ ಪ್ರತಿಮೆ ಅಂತ ಹೆಸರು ಇಡಲಾಗಿದೆ. ಪ್ರತಿಮೆ ತಯಾರಿಕೆಗೆ 98 ಟನ್ ಕಂಚು ಬಳಸಲಾಗಿದೆ. ಅಡಿಪಾಯಕ್ಕೆ 120 ಟನ್ ಕಬ್ಬಿಣ ಬಳಕೆ ಮಾಡಲಾಗಿದೆ.

ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕ ಬರೋಬ್ಬರಿ 4 ಸಾವಿರ ಕೆಜಿಯಾಗಿದೆ. ಪ್ರತಿಮೆಯ ಅಡಿಯಲ್ಲಿ 18 ಅಡಿ ವಿಸ್ತಾರವಾದ ಕಟ್ಟೆ ನಿರ್ಮಾಣವಾಗಿದೆ. ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನ ಬಣ್ಣಿಸುವ 4 ಉಬ್ಬು ಶಿಲ್ಪಗಳನ್ನು ಕಂಚಿನಲ್ಲೇ ತಯಾರಿಸಿ 4 ಕಡೆ ಅಂಟಿಸಲಾಗಿದೆ. 18 ತಿಂಗಳಲ್ಲಿ ಪ್ರತಿಮೆ ಕಾರ್ಯ ಮುಗಿಸಲಾಗಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಪ್ರತಿಮೆ ರೂಪಿಸಿದ ಶಿಲ್ಪಿ ರಾಮ ಸುತಾರ್‍ರಿಂದ ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಿದ್ದು, ವಿಶ್ವದ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ವರ್ಲ್ಡ್ ಬುಕ್ ಆಫ್ ರೇಕಾರ್ಡ್‍ನಲ್ಲಿ ಸೇರ್ಪಡೆಯಾಗಿದೆ. ಪ್ರತಿಮೆ ಸುತ್ತ 22 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್‌ (Theme Park) ಬರಲಿದ್ದು, ಇದರ ಜೊತೆ 4 ಗೋಪುರ, ಥೀಮ್ ಪಾರ್ಕ್ ನಿರ್ಮಾಣಕ್ಕೆ ಕೆಂಪೇಗೌಡರ ರಥದ ಮೂಲಕ ರಾಜ್ಯಾದ್ಯಂತ ಮೃತ್ತಿಕೆ (ಮಣ್ಣು) ಸಂಗ್ರಹಿಸಲಾಗಿದೆ. 3.61 ಕೋಟಿ ಜನರನ್ನು ಕೆಂಪೇಗೌಡರ ರಥ ತಲುಪಿದೆ. 21 ರಥ , 20 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿದೆ.

ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ವಿಶೇಷತೆಗಳೇನು..?: ಬೆಂಗಳೂರಿಗೆ ಗಾರ್ಡನ್ ಸಿಟಿ ಹೆಸರು ಇರೋದ್ರಿಂದ ಟರ್ಮಿನಲ್ ಹಸಿರುಮಯ. ಉದ್ಯಾನವನದ ಅನುಭವ ಆಗುವಂತೆ ನಿರ್ಮಾಣ ಮಾಡಲಾಗಿದೆ. ಇಡೀ ಟರ್ಮಿನಲ್, ಏರ್‍ಪೋರ್ಟ್ ಒಳಾಂಗಣ ಬಿದಿರಿನಿಂದ ವಿನ್ಯಾಸಗೊಳಿಸಲಾಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ 1ಕ್ಕೆ ಹೋಲಿಸಿದರೆ ಒಂದೂವರೆ ಪಟ್ಟು ಹೆಚ್ಚು ವಿಸ್ತೀರ್ಣವಿದ್ದು, ಸುಮಾರು 13 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ‌

ಸಿಎಟಿ 3ಬಿ ರನ್‍ವೇ ನಿರ್ಮಾಣ, ವ್ಯತಿರಿಕ್ತ ಹವಾಮಾನದಲ್ಲಿಯೂ ಸರಾಗವಾಗಿ ವಿಮಾನ ಟೇಕ್ ಆಫ್, ಲ್ಯಾಂಡಿಂಗ್ ಮಾಡಬಹುದು. ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಒಮ್ಮೆಗೆ 6 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವಿದೆ. ಮೊದಲು ದೇಶಿ ವಿಮಾನಗಳು ಹಾರಾಟ ನಡೆಸಲಿದ್ದು, ಬಳಿಕ ಅಂತರಾಷ್ಟ್ರೀಯ ವಿಮಾನಗಳ ಹಾರಾಟವಾಗಲಿದೆ. ಇದನ್ನೂ ಓದಿ: ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

ವಂದೇಭಾರತ್ ರೈಲು (Vande Bharat) ವಿಶೇಷತೆಗಳೇನು..!?: ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು ಇದಾಗಿದ್ದು, 15% ಸಲಕರಣೆಗಳನ್ನ ಮಾತ್ರ ಆಮದು ಮಾಡಿಕೊಳ್ಳಲಾಗಿದೆ. ವಂದೇಭಾರತ್ ರೈಲು ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚಾರ ಮಾಡಲಿದೆ. ಇತರ ರೈಲಿಗಿಂತ ಪ್ರಯಾಣ ಅವಧಿ 45% ಕಡಿಮೆ ಆಗಲಿದೆ. ಎಲ್ಲಾ ಕೋಚ್‍ಗಳು ಆಟೋ ಮ್ಯಾಟಿಕ್ ಡೋರ್ ವ್ಯವಸ್ಥೆ ಇರಲಿದೆ. ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುವಲ್ಸ್ ಮಾಹಿತಿ ಪ್ರಯಾಣಿಕರಿಗೆ ನೀಡುತ್ತದೆ, ಉಚಿತ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ.

ಆರಾಮದಾಯಕ ಆಸನಗಳು, ಪ್ರತಿ ಆಸನಕ್ಕೂ ಪ್ರತ್ಯೇಕ ಬೆಳಕು, ಬಯೋ ವ್ಯಾಕ್ಯೂಮ್ ಟಾಯ್ಲೆಟ್ ವ್ಯವಸ್ಥೆ ಇದೆ. ಪ್ರಯಾಣಿಕರಿಗೆ ಬಿಸಿ ಊಟ, ತಂಪು ಪಾನೀಯಗಳು ಲಭ್ಯವಿರಲಿದೆ. ಪ್ರತಿ ಕೋಚ್‍ಗೂ ಸಿಸಿಟಿವಿ ಕ್ಯಾಮರಾ, ತುರ್ತು ನಿರ್ಗಮನದ ಕಿಟಕಿ ಇರಲಿವೆ. ರೈಲು ಘರ್ಷಣೆ ತಪ್ಪಿಸಲು ಕವಚ್ ತಂತ್ರಜ್ಞಾನ ಹೊಂದಿದೆ. ಈ ರೈಲು ಇಂಜಿನ್ ಹೊಂದಿಲ್ಲ. ಡಿಸ್ಟ್ರಿಬ್ಯೂಟ್ ಟ್ರಾಕ್ಷನ್ ಪವರ್ ಸಿಸ್ಟಮ್‍ನಲ್ಲಿ ಸಂಚಾರ ಮಾಡಲಾಗಿದೆ.

ಚೆನ್ನೈ-ಬೆಂಗಳೂರು-ಮೈಸೂರು ಸಂಚಾರ: ದೇಶದ 5ನೇ ವಂದೇಭಾರತ್ ರೈಲು ಇದಾಗಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಇದಾಗಿದೆ. ಸುಮಾರು 498 ಕಿ.ಮೀ. ದೂರವನ್ನ 6 ಗಂಟೆ 40 ನಿಮಿಷದಲ್ಲಿ ತಲುಪಲಿದೆ. ಬುಧವಾರ ಬಿಟ್ಟು ವಾರದಲ್ಲಿ 6 ದಿನ ಸಂಚಾರ ಮಾಡಲಿದೆ. ಚೆನೈ ಸೆಂಟ್ರಲ್‍ನಿಂದ ಬೆಳಗ್ಗೆ 5.50 ಪ್ರಯಾಣ ಪ್ರಾರಂಭ ಮಾಡಲಿದ್ದು, 10.25 ಕ್ಕೆ ಬೆಂಗಳೂರು ತಲುಪಲಿದೆ. ರಾತ್ರಿ 10.30ಕ್ಕೆ ಬೆಂಗಳೂರು ಬಿಟ್ಟು 12.30ಕ್ಕೆ ಮೈಸೂರು ತಲುಪಲಿದೆ. ವಾಪಸ್ ಪ್ರಯಾಣ ಮಧ್ಯಾಹ್ನ 1.05ಕ್ಕೆ ಮೈಸೂರು ಬಿಟ್ಟು, 2.55ಕ್ಕೆ ಬೆಂಗಳೂರು, ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಬಿಟ್ಟು ರಾತ್ರಿ 7.35 ಕ್ಕೆ ಚೆನ್ನೈ ತಲುಪಲಿದೆ. ಒಟ್ಟಾರೆ ಇವತ್ತು ಐತಿಹಾಸಿಕ ಘಟನೆಗೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *