ಚಿತ್ರದುರ್ಗ: ಗೌರಿ ಕೊಲೆ ಆಗುವವರೆಗೂ ನಾನು ಸಮಾಜಮುಖಿ ಆಗಿರಲಿಲ್ಲವೇನೋ ಅಂತ ಅನ್ನಿಸುತ್ತಿದೆ. ಆದರೆ ನನಗೆ ಲೇಟಾಗಿ ಆದರೂ ಜ್ಞಾನೋದಯ ಆಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಮೌನವಾಗಿರುವ ಬದಲು ಪ್ರಶ್ನೆ ಮಾಡಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಜಸ್ಟ್ ಆಸ್ಕಿಂಗ್ ಚಳುವಳಿ ನಿರಂತರವಾಗಿರುತ್ತದೆ. ಗೌರಿ ಲಂಕೇಶ್ ಕೊಲೆ ವಿಜೃಂಭಿಸಿದವರನ್ನು ಪ್ರಧಾನಿ ಫಾಲೋ ಮಾಡಿದ್ದರು. ಇದನ್ನ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಜನ ಮುಗಿಬೀಳುತ್ತಿದ್ದಾರೆ ಎಂದರು.
ನನ್ನ ಇತ್ತೀಚಿನ ಸಾಮಾಜಿಕ ಹೋರಾಟಕ್ಕೆ ಬಿಜೆಪಿಯೇ ಸ್ಫೂರ್ತಿ. ರಾಜಕಾರಣಿಗಳೇ ಅಲ್ಪ ಸಂಖ್ಯಾತರು, ಮತದಾರರೇ ಬಹುಸಂಖ್ಯಾತರು. ಆದರೆ ಇಂದು ಪ್ರಶ್ನೆ ಕೇಳುವವರನ್ನು ಹತ್ತಿಕ್ಕುವ ಕೆಲಸ ಈ ದೇಶದಲ್ಲಿ ನಡೆದಿದೆ. ಹೀಗಾಗಿ ಪ್ರಶ್ನೆಗೆ ಉತ್ತರಿಸುವ ಬದಲು ಪ್ರಶ್ನೆಗೆ ಪ್ರಶ್ನೆಯನ್ನೆ ಕೇಳುತ್ತಾರೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಾನು ಮೋದಿ ವಿರುದ್ಧ ಮಾತಾಡಿದೆ ಅಂತ ಶಿವಮೊಗ್ಗ ನನ್ನಿಂದ ಅಪವಿತ್ರವಾಯಿತು ಎಂದು ಬಿಜೆಪಿಯವರು ಗೋಮೂತ್ರದಿಂದ ಕೊಠಡಿ ಸ್ವಚ್ಛಗೊಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾದರೆ ನಾನೇನು ಅಸ್ಪೃಶ್ಯನೇ? ನರೇಂದ್ರ ಮೋದಿ ಈ ದೇಶಕ್ಕೆ ದೇವರೇ ಎಂದು ಅವರು ಪ್ರಶ್ನಿಸಿದರು.
ಒಂದು ಐಡಿಯಾಲಜಿಯನ್ನು ಬೇರೆಯವರ ಮೇಲೆ ಹೇರಕೂಡದು. ಕಲಾವಿದರು ಜನಪರವಾಗಿ ಬರಬೇಕು ಆದರೆ ಯಾಕೆ ಯಾರು ಬರುತ್ತಿಲ್ಲ ಅಂತ ನಮ್ ಜನ ಕೇಳುತ್ತಾರೆ. ಹೀಗಾಗಿ ಜನಪರ ಕೆಲಸ ಮಾಡುವ ಉದ್ದೇಶದಿಂದ ಈ ಚಳುವಳಿಗೆ ಇಳಿದಿದ್ದೇನೆ ಎಂದರು.
ನನಗೆ ಪ್ರಧಾನಿ ಮೋದಿ ವಿರೋಧಿಗಳಲ್ಲ ಕೇವಲ ನದಿಯ ಮೂಲ ಹಾಗು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಚಿಂತಿಸಬೇಕಿರುವುದರಿಂದ ನಾನು ಮುಂದೆ ಬೇರೆ ಸರ್ಕಾರ ಬಂದಾಗಲೂ ಹೀಗೆಯೇ ಪ್ರಶ್ನಿಸುತ್ತೇನೆ. ಆಡಳಿತ ಸರ್ಕಾರದ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇನೆ ಅದೂ ರಾಜಕೀಯವೇ. ಆದರೆ ನನಗೆ ಶಾಸಕ, ಸಂಸದ ಆಗುವ ಆಸೆಯಿಲ್ಲ ಅಂತ ಸ್ಪಷ್ಟಪಡಿಸಿದರು.