ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

Public TV
2 Min Read

– ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ

ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಮೀಸಲಾತಿ ಜಾರಿಗೆ 6 ತಿಂಗಳ ಕಾಲಾವಕಾಶ ಕೇಳಿತ್ತು. ಸರ್ಕಾರ ಕೇಳಿದ್ದ ಕಾಲಾವಕಾಶ ಮುಗಿಯುತ್ತಿದ್ದು, ಅ.1 ರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭಿಸುವುದು ಅನಿವಾರ್ಯ ಆಗಲಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಯವರು, ಪಂಚಮಸಾಲಿ ಸಮುದಾಯದ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ಮೈಸೂರು ಭಾಗದಿಂದ ಅಭಿಯಾನ ಮಾಡುವ ಮೂಲಕ ಸಂಘಟನೆ ಮಾಡಲಾಗುತ್ತಿದೆ. ಆಗಸ್ಟ್ 26 ರಿಂದ ಅ.1 ರವರೆಗೆ ರಾಜ್ಯದ ಹಲವೆಡೆಗಳಲ್ಲಿ ಈ ಅಭಿಯಾನ ನಡೆಯಲಿದೆ. ಸರ್ಕಾರವನ್ನು ಎಚ್ಚರಗೊಳಿಸುವುದು ಮತ್ತು ಸಮುದಾಯ ಜಾಗೃತಿಗೊಳಿಸುವುದು ಈ ಅಭಿಯಾನದ ಉದ್ದೇಶ ಎಂದರು.ಇದನ್ನೂ ಓದಿ: ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ: ಯತ್ನಾಳ್

ಮೀಸಲಾತಿ ಸಿಗುವ ನಂಬಿಕೆ, ಭರವಸೆ:
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು 6 ತಿಂಗಳುಗಳ ಕಾಲ ಕಾಲಾವಕಾಶ ಕೇಳಿದ್ದರು. ಆ ಕಾಲಾವಕಾಶ ಸಹ ಮುಗಿಯುವುದರ ಜೊತೆಗೆ ಮುಖ್ಯಮಂತ್ರಿ ಅವರು ಸಹ ಬದಲಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಹೋರಾಟದ ಬಗ್ಗೆ ತಿಳಿದಿದೆ. ಪಾದಯಾತ್ರೆ ಆರಂಭದ ದಿನದಿಂದ ಇಲ್ಲಿಯವರೆಗೆ ನಮಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ನಿಮ್ಮ ಸಮುದಾಯದ ಜೊತೆ ನಾವಿದ್ದೇವೆ ನಮ್ಮ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ನಮಗೆ ಮೀಸಲಾತಿ ದೊರೆಯುತ್ತದೆ ಎಂಬ ನಂಬಿಕೆ, ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ:
ಪಂಚಮಸಾಲಿ ಸಮುದಾಯದ ಮತ್ತೊಂದು ಪೀಠ ಸ್ಥಾಪನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಾನು ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ಈ ಬಗ್ಗೆ ಸಭೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಾನು ಪಂಚಮಸಾಲಿ ಪೀಠದ ಸ್ವಾಮೀಜಿಯಾಗಿ ಈ ಸಮಾಜವನ್ನು ತುಂಬಾ ಪ್ರಾಮಾಣಿಕವಾಗಿ ಕಟ್ಟುವಂತಹ ಪ್ರಯತ್ನ ಮಾಡುತ್ತಿದ್ದೇನೆ. ಈಡಿ ಜಗತ್ತಿಗೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಈ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಲ್ಲಾ ಕಡೆ ಆಗುತ್ತಿದೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಮೀಸಲಾತಿ ಹೋರಾಟವನ್ನು ಯಾರು ಎಷ್ಟೇ ಹೊಡೆಯುವಂತಹ ಪ್ರಯತ್ನ ಮಾಡಿದರೂ, ವಿರೋಧಿಗಳು ಸಹ ನಮ್ಮವರೇ ಎಂದು ಭಾವಿಸಿ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ. ಮೀಸಲಾತಿ ಸಿಗುವವರೆಗು ಯಾವ ಕಾರಣಕ್ಕು ವಿಚಲಿತನಾಗದೇ, ಮೀಸಲಾತಿ ಪಡೆದೇ ತೀರುವುದಾಗಿ ಸ್ವಾಮೀಜಿ ತಿಳಿಸಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

Share This Article
Leave a Comment

Leave a Reply

Your email address will not be published. Required fields are marked *