ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್

Public TV
2 Min Read

ಮುಂಬೈ: ಕೆಲವು ದಿನಗಳಿಂದ ಬಿ-ಟೌನ್ ನಲ್ಲಿ ಪದ್ಮಾವತಿ ಹೆಸರು ಎಲ್ಲಡೆ ಕೇಳಿ ಬರುತ್ತಿದೆ. ಇನ್ನೂ ಅಭಿಮಾನಿಗಳು ಪದ್ಮಾವತಿಯ ಫಸ್ಟ್ ಲುಕ್ ಮತ್ತು ಟ್ರೇಲರ್ ನೋಡಿ ತಮ್ಮದೇ ಶೈಲಿಯಲ್ಲಿ ಸಿನಿಮಾದ ಗುಣಗಾನ ಮಾಡುತ್ತಿದ್ದಾರೆ. ಅಕ್ಟೋಬರ್ 19ರಂದು ಕಲಾವಿದರೊಬ್ಬರು ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ರಜಪೂತ್ ಕರ್ಣಿ ಸೇನಾದ ಸದಸ್ಯ ಮತ್ತು ಓರ್ವ ಹಿಂದೂ ಪರಷದ್ ಸದಸ್ಯ ಎಂದು ಗುರುತಿಸಲಾಗಿದೆ.

ಸಿನಿಮಾದ ಫಸ್ಟ್ ಲುಕ್ ನಿಂದ ಸ್ಪೂರ್ತಿಗೊಂಡ ಕಲಾವಿದ ಕರಣ್ ಕೆ. ಎಂಬವರು ಗುರುವಾರ ಸೂರತ್ ನಗರದ ಮಾಲ್‍ವೊಂದರಲ್ಲಿ ರಂಗೋಲಿಯಲ್ಲಿ ಪದ್ಮಾವತಿಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರ ಚಿತ್ರವನ್ನು ಬಿಡಿಸಿದ್ದರು. ಆದರೆ ಕೆಲವು ದುಷ್ಕರ್ಮಿಗಳು ರಂಗೋಲಿಯಲ್ಲಿ ಮೂಡಿದ್ದ `ಪದ್ಮಾವತಿ’ ಚಿತ್ರವನ್ನು ಅಳಿಸಿ ಹಾಕಿದ್ದಾರೆ. ಕಲಾವಿದನ 48 ಗಂಟೆಗಳ ಪರಿಶ್ರಮವನ್ನು ಕಿಡಿಗೇಡಿಗಳು ನಿಮಿಷಗಳಲ್ಲಿ ನಾಶ ಮಾಡಿದ್ದಾರೆ.

ರಂಗೋಲಿ ಇನ್ನು ಅರ್ಧ ತಯಾರಾಗುತ್ತಿದ್ದಾಗ ಬಂದ ದುಷ್ಕರ್ಮಿಗಳು ಎಲ್ಲವನ್ನು ಅಳಿಸಿ ಹಾಕಿದ್ದಾರೆ. ಈ ಸಂಬಂಧ ಕಲಾವಿದ ಕರಣ್ ದೀಪಿಕಾ ಪಡುಕೋಣೆ ಸೇರಿದಂತೆ ಸಿನಿಮಾದ ಎಲ್ಲ ಗಣ್ಯರಿಗೂ ಟ್ವೀಟ್ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದರು.

ಸಚಿವೆ ಸ್ಮೃತಿ ಇರಾನಿಗೆ ಟ್ವೀಟ್: ಕಲಾವಿದನ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದೀಪಿಕಾ ಪಡುಕೋಣೆ ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಇದೊಂದು ಹಾರ್ಟ್ ಬ್ರೇಕಿಂಗ್ ದಾಳಿ. ಕಲಾವಿದ ಕರಣ್ ಅವರ ಕಾರ್ಯಕ್ಕೆ ಅಡ್ಡಿ ಮಾಡುವುದು ಅಪರಾಧವಾಗುತ್ತದೆ. ಈ ರೀತಿ ಮಾಡಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಜನರಿಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿಕೊಳ್ಳುವ ಸ್ವಾತಂತ್ರ್ಯವಿಲ್ಲ, ಕಾನೂನನ್ನು ಕೈಗೆ ತೆಗೆದುಕೊಳ್ಳವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.

ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೋಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಕೆಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಿನಿಮಾದಲ್ಲಿ ಯವುದೇ ರೀತಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟಣೆ ನೀಡಿದ್ದಾರೆ.

ಇದೇ ಮೊದಲೇನಲ್ಲ: ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಎಲ್ಲರನ್ನು ಸೆಳೆಯಲಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಪದ್ಮಾವತಿ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

https://twitter.com/deepikapadukone/status/920599332662992896

https://twitter.com/deepikapadukone/status/920599374836785159

https://twitter.com/deepikapadukone/status/920617861340680192

https://twitter.com/bhansaliprod_fc/status/920601231319490560

Share This Article
Leave a Comment

Leave a Reply

Your email address will not be published. Required fields are marked *