ಗುಲಾಂ ನಬಿಗೆ ಪದ್ಮಭೂಷಣ: ಕೈ ನಾಯಕರ ಮಧ್ಯೆ ಈಗ ಬಹಿರಂಗ ತಿಕ್ಕಾಟ

Public TV
2 Min Read

ನವದೆಹಲಿ: ಜಮ್ಮು ಕಾಶ್ಮೀರದ ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಈಗ ಕಾಂಗ್ರೆಸ್‌ ನಾಯಕರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ.

ಬಿಜಿಪಿ ಸರ್ಕಾರ ಆಜಾದ್‌ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರೆ ಜಿ-23 ನಾಯಕರು ಅಭಿನಂದಿಸಿದ್ದಾರೆ. ಈ ಮೂಲಕ ಮತ್ತೆ ಕಾಂಗ್ರೆಸ್‌ ನಾಯಕರ ಕಚ್ಚಾಟ ಸಾರ್ವಜನಿಕವಾಗಿ ಪ್ರಕಟವಾಗಿದೆ.

ಕಾಂಗ್ರೆಸ್ ನಾಯಕತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಬೇಕು ಎಂದು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ನಾಯಕರುಗಳ ಪೈಕಿ ಗುಲಾಂ ನಬಿ ಆಜಾದ್ ಪ್ರಮುಖರಾಗಿದ್ದರು. ಜಿ-23 ನಾಯಕ ಪಟ್ಟಿಯಲ್ಲಿದ್ದ ಕಪಿಲ್ ಸಿಬಲ್, ಆನಂದ್ ಶರ್ಮ ಹಾಗೂ ಶಶಿ ತರೂರ್ ಅವರು ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಜೈರಾಮ್ ರಮೇಶ್ ಈ ಪ್ರಶಸ್ತಿಯನ್ನು ತಿರಸ್ಕರಿಸಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಮಾಜಿ ಕೆಂದ್ರ ಸಚಿವ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿ ಕಾಂಗ್ರೆಸ್‌ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಹೋದರನಿಗೆ ಅಭಿನಂದನೆಗಳು ಸಾರ್ವಜನಿಕ ಜೀವನದಲ್ಲಿ ಗುಲಾಂ ನಬಿ ಆಜಾದ್ ಅವರ ಸೇವೆಯನ್ನು ರಾಷ್ಟ್ರ ಗುರುತಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಇವರ ಸೇವೆ ಅಗತ್ಯವಿಲ್ಲ ಎನ್ನುವ ರೀತಿ ಇದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

ಅಧಿಕಾರದಲ್ಲಿ ಬೇರೆ ಪಕ್ಷ ಇದ್ದ ನಡುವೆಯೂ ವ್ಯಕ್ತಿಯೊಬ್ಬರ ಸಾರ್ವಜನಿಕ ಸೇವೆಯನ್ನು ಗುರುತಿಸಿರುವುದು ಒಳ್ಳೆಯ ವಿಚಾರ ಎಂದು ಶಶಿ ತರೂರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಸಂಸತ್ತಿನ ಪ್ರಜಾಪ್ರಭುತ್ವ ಹಾಗೂ ಸಾರ್ವಜನಿಕ ಸೇವೆಯಲ್ಲಿ ತಮ್ಮ ಜೀವಮಾನ ಪೂರ್ತಿ ಕಳೆದ ಗುಲಾಂ ನಬಿ ಆಜಾದ್ ಅವರಿಗೆ ಅರ್ಹವಾಗಿ ಸಿಕ್ಕಿರುವ ಗೌರವ ಎಂದು ಆನಂದ್ ಶರ್ಮ ಟ್ವೀಟ್ ಮಾಡಿದ್ದಾರೆ.

ಮಾಜಿ ಸಚಿವ ಜೈರಾಮ್ ರಮೇಶ್ ಅವರು ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸಿದ ಪಶ್ಚಿಮ ಬಂಗಾಳದ ಬುದ್ಧದೇವ್ ಭಟ್ಟಾಚಾರ್ಯ ಅವರ ಉದಾಹರಣೆಯನ್ನು ಉಲ್ಲೇಖಿಸಿ, ಬುದ್ಧದೇವ್ ಅವರು ಸರಿಯಾದುದನ್ನೇ ಮಾಡಿದ್ದಾರೆ, ಅವರಿಗೆ ಆಜಾದಿ ಬೇಕಾಗಿದೆ. ಗುಲಾಮಗಿರಿಯಲ್ಲ ಎಂದು ಬರೆಯುವ ಮೂಲಕ ಟಾಂಗ್‌ ನೀಡಿದ್ದಾರೆ.

ಜಮ್ಮು ಕಾಶ್ಮೀರದ 7ನೇ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಆಜಾದ್ ಐದು ಬಾರಿ ರಾಜ್ಯಸಭಾ, ಎರಡು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 2021ರ ಫೆಬ್ರವರಿ 16 ರಂದು ಆಜಾದ್ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿತ್ತು. ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಜಾದ್ ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿರಲಿಲ್ಲ. ದೇಶ ಮತ್ತು ಸದನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಹೇಳಿ ಭಾವುಕರಾಗಿದ್ದರು. ಇದನ್ನೂ ಓದಿ: ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

Share This Article
Leave a Comment

Leave a Reply

Your email address will not be published. Required fields are marked *