ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

Public TV
2 Min Read

ಬೆಂಗಳೂರು: ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಕೈ ಪಾಲಿಕೆ ಸದಸ್ಯೆ ಮತ್ತು ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಆರೋಪ ಮಾಡಿದ್ದಾರೆ.

ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡಲು ಈ ರೀತಿಯ ದಾರಿ ಹಿಡಿಯಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿಯ ಆರಂಭದಲ್ಲಿ ಆರ್ ಆರ್ ನಗರ ಕಾಂಗ್ರೆಸ್ ಕಾರ್ಪೊರೇಟರ್ ಆಶಾ ಸುರೇಶ್ ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದಾರೆ ಎಂದು ಹೇಳಿ ಅವರು ಪ್ರಚಾರ ನಡೆಸಿದ ವಿಡಿಯೋವನ್ನು ಬಿಡುಗಡೆ ಮಾಡಿದರು.

ನಾವು ಮೌನವಾಗಿದ್ದೇವೆ. ಆದರೆ ಇದು ಮಿತಿಮೀರಿದೆ. ಬಿಜೆಪಿ ತುಳಸಿ ಮುನಿರಾಜ್ ನಾವು ನೀವು ಅಂದುಕೊಂಡ ವ್ಯಕ್ತಿಯಲ್ಲ. ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಈ ಬಾರಿ ಹಠಕ್ಕೆ ಬಿದ್ದು ಗೆಲ್ಲಲು ಹೊರಟಿದ್ದಾರೆ. ಅವರು ಏನೇನು ಮಾಡಿದ್ದಾರೆ ಎನ್ನುವುದಕ್ಕೆ ಎಲ್ಲ ದಾಖಲೆ ಇದೆ. ಅವರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಇದೆ ಎನ್ನುವುದು ಗೊತ್ತು. ಅವರ ಹಿನ್ನೆಲೆ ನನಗೆ ಗೊತ್ತಿದೆ. ಬಳ್ಳಾರಿ ಗಣಿಯನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಮುನಿರಾಜು ಅವರು ಎಂದು ಆರೋಪಿಸಿದರು.

ವೋಟರ್ ಐಡಿಗಳನ್ನು ಕಾಂಗ್ರೆಸ್‍ನವರು ತಂದಿಟ್ಟಿದ್ದಾರೆ ಎಂದು ಯಾವ ಆಧಾರದಲ್ಲಿ ಆರೋಪ ಮಾಡುತ್ತಾರೆ? ವೋಟರ್ ಐಡಿ ಸ್ಲಂ ಜನರಿಗೆ ಸಂಬಂಧಿಸಿದ್ದು. ಅದು ಕಾಂಗ್ರೆಸ್ ಭದ್ರಕೋಟೆ ಸ್ಲಂ. 9 ಸಾವಿರ ವೋಟರ್ ಐಡಿಯಲ್ಲಿ ಸುಮಾರು ಐದು ಸಾವಿರ ಮುಸ್ಲಿಂ ಹಾಗೂ ಎರಡು ಸಾವಿರದಷ್ಟು ದಲಿತರು ಇದ್ದಾರೆ. ಎಸ್.ರಮೇಶ್ ಕಾಲದಿಂದಲೂ ಇವರು ನಮ್ಮ ಪರವಾಗಿಯೇ ಇದ್ದಾರೆ. ಹೀಗಿರುವಾಗ ನಾನು ಯಾಕೆ ವೋಟರ್ ಐಡಿಗಳನ್ನು ಸಂಗ್ರಹಿಸಲಿ ಎಂದು ಪ್ರಶ್ನಿಸಿದರು.

ವೋಟರ್ ಐಡಿಯಿಂದ ಚುನಾವಣೆ ಮುಂದೂಡಿದರೆ ಇದೊಂದು ಐತಿಹಾಸಿಕ ವಾಗಲಿದೆ. ಮುಂದೆ ಯಾರಾದರೂ ಆಗದಿರುವವರ ಮನೆಗಳಲ್ಲಿ ವೋಟರ್ ಐಡಿ ಇಟ್ಟು ಚುನಾವಣೆ ಮುಂದೂಡಬಹುದು. 500 ಟೀಶರ್ಟ್ ನೀಡಲು ನಾನು ಅನುಮತಿ ಪಡೆದಿದ್ದೇನೆ. ಐದು ಸಾವಿರ ಟೀಶರ್ಟ್ ಗಳನ್ನು ಮುನಿರಾಜು ಕಡೆಯವರು ಸೀಜ್ ಮಾಡುತ್ತಾರೆ. ಆಮೇಲೆ ಪೊಲೀಸರು ಬರುತ್ತಾರೆ. ಪ್ರತಿ ಸಲನೂ ಅದ್ ಹೇಗೆ ಅವರ ಕೈಗೆ ಸಿಗುತ್ತೆ? ಎಫ್ ಬಿ ಲೈವ್ ಮಾಡ್ತಾರೆ. ಕೆಲವೊಮ್ಮೆ ಸದಾಶಿವನಗರದಲ್ಲಿ ಕೆಲವು ವಸ್ತುಗಳನ್ನು ಹಿಡಿದು ನನ್ನ ಹೆಸರನ್ನು ಹೇಳಿದ್ದಾರೆ. ಆ ಕ್ಷೇತ್ರದಲ್ಲಿ ನಾನು ಯಾಕೆ ಟೀ ಶರ್ಟ್ ಹಂಚಲಿ ಇದೆಲ್ಲವೂ ತುಳಸಿ ಮುನೀರಾಜ್ ಕೃತ್ಯ ಎಂದು ಆರೋಪಿಸಿದರು.

ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಬಗ್ಗೆ ನಾನು ಏನು ಮಾತಾನಾಡಲ್ಲ. ಅವರ ಹತ್ತಿರ ಗನ್ ಬೇರೆ ಇದೆ. ನನಗೆ ಯಾಕೆ ಅವರ ವಿಚಾರ ಎಂದು ಮುನಿರತ್ನ ವ್ಯಂಗ್ಯವಾಡಿದರು.

ಮೇ 16 ರಂದು ನನ್ನ ವಿರುದ್ಧ ತೇಜೋವಧೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕುತ್ತೆನೆ. ನನ್ನ ಬಗ್ಗೆ ಕೆಟ್ಟ ಪದಗಳನ್ನು ಆಡಿದ ಆಶಾ ಸುರೇಶ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

ನಾನು ಎಂಟು ವರ್ಷದಿಂದ ಮಕ್ಕಳ ಶಾಲೆ ಫೀಸ್ ಕಟ್ಟುತ್ತಿದ್ದೇನೆ. ಕುಕ್ಕರ್ ನೀಡುತ್ತೇನೆ. ವೈದ್ಯಕೀಯ ಸಹಾಯ ನೀಡುತ್ತೇನೆ. ಆದರೆ ನೀತಿ ಸಂಹಿತೆ ಜಾರಿಯಾದ ಮೇಲೆ ಅದನ್ನೆಲ್ಲ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಇದನ್ನೆಲ್ಲ ಮಾಡಲೇ ಬೇಕು. ಎಲ್ಲಾ ಕಡೆ ಮತದಾರರಿಗೆ ಉಡುಗೊರೆ ಕೊಡ್ತಾರೆ. ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕೂಡ ಹಂಚಿದ್ದಾರೆ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *