ಬೆಂಗಳೂರು: ಟಿಪ್ಪು ಜಯಂತಿ ವಿಚಾರದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಜೆಪಿಯಲ್ಲಿ ಇದ್ದಾಗ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಕೆಜೆಪಿ ಪಕ್ಷಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಬಿಎಸ್ವೈ ಜೊತೆಯಲ್ಲಿ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗವಹಿಸಿದ್ದರು. ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸುತ್ತದೆ, ಭಾಗವಹಿಸುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಆದರೆ, ಆಗ ವಿರೋಧ ವ್ಯಕ್ತಪಡಿಸಿದವರು ಈಗ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ಬಿಜೆಪಿಯಲ್ಲಿದ್ದಾಗ ಒಂದು ನಿಲುವು, ಕೆಜೆಪಿಯಲ್ಲಿ ಇದ್ದಾಗ ಒಂದು ನಿಲುವು ಯಾಕೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್ವೈ ದಾಖಲೆ ಬಿಡುಗಡೆ
ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಅವ್ಯವಹಾರಕ್ಕೆ ಸಂಬಂಧಿಸಿ ಸಿಎಂ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಬಿಎಸ್ ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ಕುರಿತಂತೆ ಮಾತನಾಡಿದ ಅವರು, ಯಡಿಯೂರಪ್ಪ ಹತ್ತಿರ ದಾಖಲೆ ಇದ್ರೆ ಕೊಡಲಿ. ದಾಖಲೆ ಕೊಟ್ರೆ ಅದಕ್ಕೆ ಒಂದು ಅರ್ಥ ಇರುತ್ತದೆ. ಹಿಂದೆ ಬಿಜೆಪಿ ಅಧಿಕಾರದಲ್ಲೂ ಇಂಧನ ಸಚಿವರ ಮೇಲೆ ಆರೋಪ ಕೇಳಿ ಬಂದಿತ್ತು. ಆದರೆ ಸಚಿವರ ಮೇಲೆ, ಸಿಎಂ ಮೇಲೆ ದಾಖಲೆ ಬಿಡುಗಡೆ ಮಾಡೋದಾಗಿ ಯಡಿಯೂರಪ್ಪ 2-3 ತಿಂಗಳಿಂದ ಹೇಳುತ್ತಾನೆ ಇದ್ದಾರೆ. ಬಿಡುಗಡೆ ಮಾಡಿದ್ದು ಯಾವುದೂ ಇಲ್ಲ ಎಂದು ಬಿಎಸ್ವೈ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.
ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಮಾಧ್ಯಮದ ಮುಂದೆ ಗೊತ್ತಿರುವ ಎಲ್ಲ ವಿಚಾರ ಹೇಳೋದಕ್ಕೆ ಆಗುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳ್ತೀವಿ ಎಂದು ತಿಳಿಸಿದರು.