ಮೊಬೈಲ್‍ಗಾಗಿ ಸ್ನೇಹಿತನ ಕೊಲೆ- ಮಧ್ಯರಾತ್ರಿ ಎಣ್ಣೆ ಪಾರ್ಟಿಯಲ್ಲಿ ಕೃತ್ಯ

Public TV
1 Min Read

– ದೂರು ದಾಖಲಾದ 2 ಗಂಟೆಯಲ್ಲಿ ಊರು ಬಿಟ್ಟಿದ್ದ ಆರೋಪಿ ಅರೆಸ್ಟ್

ಬೆಳಗಾವಿ: ಮೊಬೈಲ್ ವಿಚಾರವಾಗಿ ಜಗಳವಾಡಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಘಟನೆ ಬೆಳಗಾವಿ ತಾಲೂಕಿನ ಬಿ.ಕೆ ಕಂಗ್ರಾಳಿಯಲ್ಲಿ ನಡೆದಿದೆ.

ಶಂಕರ್ ಪಾಲ್ಕರ್ (30) ಕೊಲೆಯಾದ ವ್ಯಕ್ತಿ. ಈತ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಮದುವೆ ಕೂಡ ಆಗಿರಲಿಲ್ಲ. ಶಂಕರ್‌ಗೆ ಎಂಟು ವರ್ಷದ ಹಿಂದೆ ಮಹೇಶ್ ಪರಿಚಯವಾಗಿದ್ದನು. ಈತ ಕೂಡ ಬೆಳಗಾವಿಯ ರಾಮನಗರದ ನಿವಾಸಿಯಾಗಿದ್ದು, ಇಬ್ಬರು ಅಕ್ಕಪಕ್ಕದ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಜೊತೆಗೆ ಒಂದೇ ವೃತ್ತಿ ಆಗಿದ್ದರಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.

ಭಾನುವಾರ ಇಬ್ಬರೂ ಮಧ್ಯ ರಾತ್ರಿವರೆಗೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ನಂತರ ಮಹೇಶ್ ಹೊಸದೊಂದು ಮೊಬೈಲ್ ಕೊಡಿಸು ನನ್ನ ಮೊಬೈಲ್ ಹಾಳಾಗಿದೆ ಎಂದು ಶಂಕರ್ ಬಳಿ ಕೇಳಿದ್ದಾನೆ. ಆಗ ಶಂಕರ್, ನಿನಗ್ಯಾಕೆ ಮೊಬೈಲ್ ಕೊಡಿಸಬೇಕೆಂದು ಹೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆಗ ಶಂಕರ್ ಬಳಿಯಿದ್ದ ಚಾಕುವನ್ನ ಮಹೇಶ್ ಕಸಿದುಕೊಂಡು ಶಂಕರ್ ಹೊಟ್ಟೆಗೆ ಇರಿದಿದ್ದಾನೆ. ಹಲ್ಲೆಗೊಳಗಾಗಿ ಶಂಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿ.ಕೆ ಕಂಗ್ರಾಳಿ ಗ್ರಾಮದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಮೂವರು ಪಾರ್ಟಿ ಮಾಡಿದ್ದಾರೆ. ಆದರೆ ಲೇಟ್ ಆಗಿದ್ದಕ್ಕೆ ಓರ್ವ ಸ್ನೇಹಿತ ಮನೆಗೆ ಹೋಗಿದ್ದಾನೆ. ಆಗ ಮಹೇಶ್ ಮತ್ತು ಶಂಕರ್ ನಡುವೆ ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಗಲಾಟೆಯಾಗಿದೆ. ಈ ವೇಳೆ ಮಹೇಶ್, ಶಂಕರ್‌ಗೆ ಚಾಕುವಿನಿಂದ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಈ ಕುರಿತು ಶಂಕರ್ ಸಹೋದರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತಕ್ಷಣ ಎಚ್ಚೆತ್ತುಕೊಂಡ ಎಪಿಎಂಸಿ ಪೊಲೀಸರು ದೂರು ದಾಖಲಾದ ಎರಡೇ ಗಂಟೆಯಲ್ಲಿ ಊರು ಬಿಟ್ಟಿದ್ದ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆ ಮಾಡಿದ ಹಂತಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಕುಡಿದು ಕೊಲೆ ಮಾಡುವ ಮಟ್ಟಿಗೆ ಯಾರು ಹೋಗಬಾರದು ಎಂದು ಸಂಬಂಧಿಕರು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *