ಧಾರವಾಡ: ಬಿಜೆಪಿ ಹಾಗೂ ಕೆಲ ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಶುಕ್ರವಾರ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗಿತ್ತು.
ಧಾರವಾಡದ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಕುಂದಗೋಳ ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ತಲೆಗೆ ಟಿಪ್ಪು ಪೇಟಾ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಶಾಸಕರ ಡ್ಯಾನ್ಸ್ ವಿಡಿಯೋ ಎಲ್ಲೆಡೆ ಇದೀಗ ವೈರಲ್ ಆಗಿದೆ.
ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿಗೆ ಶುಭಕೋರಿರುವ ಫ್ಲೆಕ್ಸ್ ಗಳಿಗೆ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿತ್ತು. ಈ ವಿಚಾರಕ್ಕೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: ಶಾಸಕ ಆನಂದ್ ಸಿಂಗ್ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್
ಇನ್ನು ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆಯ ವಿರೋಧವಾಗಿ ರಸ್ತೆಗೆ ಮರಗಳನ್ನು ಕಡಿದು ಜಯಂತಿ ಆಚರಿಸದಂತೆ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲ ಕಿಡಿಗೇಡಿಗಳು ಕೆಎಸ್ಆರ್ ಟಿಸಿ ಬಸ್ ಗೆ ಕಲ್ಲು ತೂರಾಟ ನಡೆಸಿದ್ದರು. ಟಿಪ್ಪು ಜಯಂತಿ ಆಚರಣೆಯ ವೇಳೆ ಕುಟ್ಟಪ್ಪ ಎಂಬವರು ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಿಸಬಾರದೆಂದು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಶಾಸಕ ಅಪ್ಪಚ್ಚು ರಂಜನ್ ಸೇರಿ ಹಲವು ಕಾರ್ಯಕರ್ತರನ್ನು ಬಂಧಿಸಿದ್ದರು. ರಾಜ್ಯದ ಜಿಲ್ಲೆಗಳಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರನ್ನು ಪೊಲಿಸರು ಬಂಧಿಸಿದ್ದರು.
ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ, ಮತ್ತೊಂದೆಡೆ ಬೆಂಬಲಿಸುವ ಬಿಜೆಪಿಯ ದ್ವಿಮುಖ ಧೋರಣೆ ಅನಾವರಣ