ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ, ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು: ಕಾರಜೋಳ

Public TV
2 Min Read

– ಖಾದಿ ಎಂಪೋರಿಯಂನಲ್ಲಿ ಎಲೆಕ್ಷನ್ ಟಿಕೆಟ್ ಟಾಕ್

ಬೆಂಗಳೂರು: ನನಗೆ ಸೀರೆ ಖರೀದಿ ಬಗ್ಗೆ ಗೊತ್ತಿಲ್ಲ. ಇದು ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಎಂದು ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಕೆಲ ಕಾಲ ತಮಾಷೆಯ ಮಾತುಗಳನ್ನಾಡಿದ ಪ್ರಸಂಗ ಇಂದು ನಡೆದಿದೆ.

ಗಾಂಧಿ, ನೆಹರೂ ಜಯಂತಿ ದಿನವಾದ ಇಂದು ಶಿವಾನಂದ ಸರ್ಕಲ್‍ನಲ್ಲಿರುವ ಖಾದಿ ಎಂಪೋರಿಯಂಗೆ ಸಿಎಂ ಭೇಟಿ ನೀಡಿದರು. ಅಲ್ಲದೆ ತಲಾ ಮೂರು ಮೀಟರ್ ಅಳತೆಯ 10 ಖಾದಿ ಜುಬ್ಬಾ ಪೀಸ್ ಖರೀದಿಸಿದರು. ಜೊತೆಗೆ ತಮ್ಮ ಪತ್ನಿಗೂ ಖಾದಿ ಸೀರೆ ಖರೀದಿಸಿದರು.

ಇದೇ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ಅಲ್ಲಿಗೆ ಆಗಮಿಸಿದರು. ಏನ್ ಸೀರೆ ಖರೀದಿ ಜೋರಾ ಎಂದು ಸಿಎಂಗೆ ವಿಜಯೇಂದ್ರ ಹೇಳಿದರು. ಈ ವೇಳೆ ಸಿಎಂ, ನಮ್ಮದು ಮುಗೀತು ಈಗ ನೀವು ತಗೊಳ್ಳಿ ಎಂದರು. ಸಿಎಂ ಮಾತಿನಂತೆ ವಿಜಯೇಂದ್ರ ಕೂಡ ಮಡದಿಗೆ ಸೀರೆ ಖರೀದಿಸಿದರು. ಇತ್ತ ಸಿಎಂ ಅವರು ಗೋವಿಂದ ಕಾರಜೋಳ ಅವರಿಗೂ, ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದು ಹೇಳಿದರು. ಆಗ ಕಾರಜೋಳ ಅವರು ಬೇಡ, ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ. ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು ಅಂದ್ರು. ಇತ್ತ ಸಿಎಂ ಕೂಡ ಕಾರಜೋಳ ಮಾತಿಗೆ ದನಿಗೂಡಿಸಿದ್ದು, ನಮಗೆ ಸೆಲೆಕ್ಷನ್ ಗೊತ್ತಾಗಲ್ಲ ಎಂದ ತಮಾಷೆಯಾಗಿ ಮಾತಾಡಿದರು. ಇದನ್ನೂ ಓದಿ: ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ – ಹೊಟ್ಟೆ ಕಿಚ್ಚಾಯ್ತಾ ಅಂತ ಪ್ರಶ್ನಿಸಿದ್ಯಾರಿಗೆ?

ಕೊನೆಗೆ ಸಿಎಂ ಮಾತಿಗೆ ಕಟ್ಟು ಬಿದ್ದು ಇರಲಿ, ನನಗೊಂದು ಸೀರೆ ಕೊಡಿ ಅಂತ ಗೋವಿಂದ ಕಾರಜೋಳ ಸೀರೆ ಖರೀದಿ ಮಾಡಿದರು. ಇತ್ತ ಸಚಿವ ಎಂಟಿಬಿಯಿಂದಲೂ ಖಾದಿ ಬಟ್ಟೆ ಖರೀದಿಸಿದರು. ಇದನ್ನೂ ಓದಿ:  ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

ಎಲೆಕ್ಷನ್ ಟಿಕೆಟ್ ಟಾಕ್:
ಖಾದಿ ಎಂಪೋರಿಯಂನಲ್ಲಿ ಚುನಾವಣೆಗೆ ಟಿಕೆಟ್ ಬಗ್ಗೆ ಚರ್ಚೆ ನಡೆದಿದೆ. ಖಾದಿ ಎಂಪೋರಿಯಂ ಒಳಗೇ ಪ್ರತ್ಯೇಕವಾಗಿ ಹಾನಗಲ್ ಕ್ಷೇತ್ರದ ಉಪಚುನಾವಣೆ ಟಿಕೆಟ್ ಬಗ್ಗೆ ಸಿಎಂ ಜೊತೆ ಸಂಸದ ಶಿವಕುಮಾರ್ ಉದಾಸಿ ಮತ್ತು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಚರ್ಚಿಸಿದರು. ತಮ್ಮ ಪತ್ನಿಗೆ ಟಿಕೆಟ್ ಗಾಗಿ ಸಿಎಂ ಹಿಂದೆ ಬಿದ್ದಿರುವ ಸಂಸದ ಶಿವಕುಮಾರ್ ಉದಾಸಿ, ಮೂರ್ನಾಲ್ಕು ದಿನಗಳಿಂದ ಪದೇ ಪದೇ ಸಿಎಂ ಭೇಟಿಯಾಗುತ್ತಿದ್ದಾರೆ. ಇಂದು ವಿಧಾನಸೌಧದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಜೊತೆಯೇ ಇದ್ದರು. ನಾಳೆ ಅರುಣ್ ಸಿಂಗ್ ಬಂದ ಬಳಿಕ ಟಿಕೆಟ್ ಫೈನಲ್ ಆಗುವ ಹಿನ್ನೆಲೆಯಲ್ಲಿ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವ ಸಂಬಂಧ ಉದಾಸಿ ಲಾಬಿ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *