ನಿಲ್ಲದ ಬಡ್ಡಿ ದಂಧೆಕೋರರ ಅಟ್ಟಹಾಸ- ಉಡುಪಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

Public TV
2 Min Read

ಉಡುಪಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ನಂಬರ್ ವನ್. ಈ ಸುಶಿಕ್ಷಿತ ಜಿಲ್ಲೆಯಲ್ಲೂ ಮೀಟರ್ ಬಡ್ಡಿ ವ್ಯವಹಾರ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಇಲ್ಲೊಬ್ಬರು ಅದೇ ಮೀಟರ್ ಬಡ್ಡಿ ವ್ಯವಹಾರದ ಬಲೆಯಲ್ಲಿ ಸಿಲುಕಿ ಕುಟುಂಬಕ್ಕೆ ಕುತ್ತನ್ನು ತಂದುಕೊಂಡಿದ್ದಾರೆ. ಬಡ್ಡಿ ವ್ಯಾಪಾರಿಯ ಕಿರುಕುಳದಿಂದ ಮನೆ ಯಜಮಾನ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೀಟರ್ ಬಡ್ಡಿಯವರ ಕಿರುಕುಳದಿಂದ ನಮ್ಮನ್ನು ರಕ್ಷಿಸಿ ಎಂದು ನೊಂದ ಕುಟುಂಬ ಅಂಗಲಾಚಿದೆ.

ಸುಜಯ್ ಶೆಟ್ಟಿ

ಜಿಲ್ಲೆಯ ಕುಂದಾಪುರದ ಆಲೂರಿನ ನಿವಾಸಿ ರಾಘವೇಂದ್ರ ಜೋಯಿಸ್ ಅವರು ಹೈನುಗಾರಿಕೆ ಹಾಗೂ ಸಾಫ್ಟ್‍ವೆರ್ ಅಭಿವೃದ್ಧಿ ಕೆಲಸ ಮಾಡ್ಕೊಂಡಿದ್ದ ಇವರು 2016ರಲ್ಲಿ ಉದ್ಯೋಗಕ್ಕೆ ಅಂತ ಬಡ್ಡಿ ವ್ಯಾಪಾರಿ ಸುಜಯ ಶೆಟ್ಟಿ ಬಳಿ 20 ಲಕ್ಷ ರೂಪಾಯಿ ಸಾಲ ಪಡೆದಿದ್ರು. ನಂತ್ರ ಪ್ರತಿ ತಿಂಗಳು ಶೇಕಡಾ 5 ರಂತೆ 1 ಲಕ್ಷ ಬಡ್ಡಿ ಪಾವತಿಸುತ್ತಿದ್ರು. ಆದ್ರೆ ಕಳೆದ 3 ತಿಂಗಳಿಂದ ಉದ್ಯೋಗದಲ್ಲಿ ನಷ್ಟವಾಗಿ ಹಣ ಕೊಡಲು ಆಗ್ಲಿಲ್ಲ. ಸ್ವಲ್ಪ ಟೈಂ ಕೊಡಿ ಅಂದ್ರೂ ಸುಮ್ಮನಿರದ ಸುಜಯ್ ಶೆಟ್ಟಿ ಮಧ್ಯವರ್ತಿಯೊಬ್ಬರ ಮನೆಗೆ ಕರೆಸಿ ಹಲ್ಲೆ ನಡೆಸಿದ್ದಾನಂತೆ. ನಿರಂತರ ಕಿರುಕುಳದಿಂದ ನೊಂದ ರಾಘವೇಂದ್ರ, ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ರಾಘವೇಂದ್ರ ಈಗಾಗಲೇ 30 ಲಕ್ಷ ರೂಪಾಯಿ ಬಡ್ಡಿ ಪಾವತಿಸಿದ್ದಾರೆ. ಇಷ್ಟಾದ್ರೂ ಅಕ್ಟೋಬರ್ 25ರ ಸಂಜೆ 3 ಗಂಟೆಯೊಳಗೆ ಬಾಕಿಯಿರೋ 16 ಲಕ್ಷ ಕೊಡದಿದ್ರೆ ಇಡೀ ಕುಟುಂಬದವನ್ನೇ ನಾಶ ಮಾಡ್ತೀನಿ ಅಂತ ಸುಜಯ್ ಶೆಟ್ಟಿ ಬೆದರಿಕೆ ಹಾಕಿದ್ದಾನೆ. ಇನ್ನು ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರನ್ನು ನೀಡಿದ್ರೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಸತಾಯಿಸ್ತಿದ್ದಾರೆ ಅಂತ ರಾಘವೇಂದ್ರ ಸಹೋದರ ಗುರುಪ್ರಸಾದ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕೋಕೆ ಮುಂದಾಗಿದ್ದಾರೆ. ಮತ್ತೊಂದ್ಕಡೆ ದಂಧೆಕೋರರ ಸುಲಿಗೆ ಮಾತ್ರ ನಿಲ್ತಾನೇ ಇಲ್ಲ. ಇನ್ನಾದ್ರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕುವ ಮೂಲಕ ರಾಘವೇಂದ್ರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *