ಮಂಗಳೂರು: ಸುರತ್ಕಲ್ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣಕ್ಕೆ(Surathkal Jaleel Murder Case) ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಹಿಳೆಯರನ್ನು ವಿಚಾರಣೆ ನಡೆಸಿದ್ದು ಗಾಂಜಾ ಮಾಫಿಯಾದ ವಾಸನೆ ಬಂದಿದೆ.
ವ್ಯಾಪಾರಿ ಜಲೀಲ್ ಹತ್ಯೆಯ ನಡೆಸಿ ಪರಾರಿಯಾದ ಇಬ್ಬರು ದುಷ್ಕರ್ಮಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದಾರೆ. ಈ ನಡುವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ವಿಚಾರಣೆ ನಡೆಸಿದ್ದಾರೆ.
ಶನಿವಾರ ಸಂಜೆ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಜಲೀಲ್ ಜೊತೆ ಕೆಲ ಕಾಲ ಮಾತಿನ ಚಕಮಕಿ ನಡೆಸಿದ ಬಳಿಕ ಏಕಾಏಕಿ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಆರೋಪಿಗಳು ಯಾರು ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.
ಅನುಮಾನ ಇದ್ದ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ನಡುವೆ ಸುರತ್ಕಲ್ ಠಾಣೆಗೆ ಇಬ್ಬರು ಮಹಿಳೆಯರನ್ನು ಕರೆಸಿಕೊಂಡ ಪೊಲೀಸರು ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಕೊಲೆಯ ಕಾರಣಗಳ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ: ಜಲೀಲ್ ಯಾವುದೇ ಗಲಾಟೆಗೆ ಹೋಗದ ಬಡಪಾಯಿ : ಸಹೋದರ ಮಹಮ್ಮದ್
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್(Mangaluru Police Commissioner Shashi Kumar) ತನಿಖೆ ಪೂರ್ಣಗೊಳ್ಳುವುವರೆಗೂ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಶೀಘ್ರದಲ್ಲೇ ಆರೋಪಿಗಳ ಬಂಧನ ಆಗಲಿದೆ ಎಂದು ತಿಳಿಸಿದ್ದಾರೆ.
ಜಲೀಲ್ ಸುಮಾರು 15 ವರ್ಷಗಳಿಂದ ಕಾಟಿಪಳ್ಳದ ನಾಲ್ಕನೇ ಬ್ಲಾಕ್ನಲ್ಲಿ ಫ್ಯಾನ್ಸಿ ಅಂಗಡಿ ತೆರೆದಿದ್ದರು. ಎಲ್ಲಾ ಜಾತಿ, ಧರ್ಮದವರ ಚೆನ್ನಾಗಿದ್ದರು. 42 ವರ್ಷದ ಜಲೀಲ್ ಅವರಿಗೆ ಮದುವೆಯಾಗಿದ್ದರೂ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಕಳೆದ ಆರು ತಿಂಗಳ ಹಿಂದೆ ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು.
ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಕೆಲ ಯುವಕರು ಹಾಗೂ ಮಹಿಳೆಯರು ಇವರೊಂದಿಗೆ ಮಾತಿನ ಚಕಮಕಿ ನಡೆಸಿ ಧಮ್ಕಿ ಹಾಕಿದ್ದ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಈಗ ಅದೇ ಯುವಕರು ಹಾಗೂ ಮಹಿಳೆಯರ ತಂಡ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಇದ್ದು ಪೊಲೀಸರು ಈ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಹಲ್ಲೆ ನಡೆಸಿದ ಇಬ್ಬರು ದುಷ್ಕರ್ಮಿಗಳು ಗಾಂಜಾ ವ್ಯಸನಿಗಳಾಗಿರಬಹುದು ಎಂಬ ಶಂಕೆ ಇದ್ದು ಗಾಂಜಾ ನಶೆಯಲ್ಲೂ ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ.
ಹತ್ಯೆಯ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ಈ ಹತ್ಯೆ ಆಗಬಾರದಿತ್ತು. ಇದು ಬಹಳ ದುರದೃಷ್ಟಕರ. ತನಿಖೆ ಪ್ರಗತಿಯಲ್ಲಿದೆ. ಜನರು ಊಹಾಪೋಹಗಳಿಗೆ ಕಿವಿಕೊಡಬಾರದು. ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.