ಸುಮಲತಾರ ಅಲೆಗೆ ಸಿಎಂ ಹೆದ್ರಿದ್ದಾರೆ- ನಿಖಿಲ್ ನಾಮಪತ್ರ ರದ್ದಾಗಲಿದೆ: ಬಿಎಸ್‍ವೈ

Public TV
2 Min Read

ಬೆಳಗಾವಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರ ಅಲೆ ಜೋರಾಗಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಹೆದರಿದ್ದಾರೆ. ಮಗನ ಸೋಲಿನ ಭೀತಿಯಿಂದ ಹತಾಶರಾಗಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.

ನಿಖಿಲ್ ನಾಮಪತ್ರ ರದ್ದು:
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರವಾಗಿ ಪ್ರತಿಕ್ರಿಯಿಸಿ, ಸುಮಲತಾರ ಅಲೆಗೆ ಹೆದರಿ, ತಮ್ಮ ಪುತ್ರನ ಸೋಲಿನ ಭೀತಿಯಿಂದ ಸಿಎಂ ಹತಾಶರಾಗಿದ್ದಾರೆ. ನಿಖಿಲ್ ಅವರ ನಾಮಪತ್ರ ರದ್ದಾಗಲಿದೆ. ಈಗ ಆಗದೇ ಇದ್ರೆ ಮುಂದೆ ಕೋರ್ಟ್‍ನಲ್ಲಿ ರದ್ದಾಗುತ್ತೆ. ಸಿಎಂ ಅವರ ಅಧಿಕಾರವನ್ನು ಉಪಯೋಗಿಸಿಕೊಂಡು ನಾಮಪತ್ರದಲ್ಲಾದ ಲೋಪಗಳನ್ನು ಸರಿಪಡಿಸಿದ್ದಾರೆ. ಮಂಡ್ಯ ಚುನಾವಣಾ ಅಧಿಕಾರಿಯನ್ನ ತಕ್ಷಣ ವರ್ಗಾವಣೆ ಮಾಡಬೇಕು. ಅಲ್ಲಿ ದಕ್ಷ ಅಧಿಕಾರಿಯನ್ನ ನೇಮಿಸಿ, ಈ ವಿಚಾರದ ಬಗ್ಗೆ ತನಿಖೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.


ಕತ್ತಿ ಸಹೋದರರ ಭೇಟಿ:
ಬಳಿಕ ಕತ್ತಿ ಸಹೋದರರ ರೆಬಲ್ ವಿಚಾರ ಪ್ರತಿಕ್ರಿಯಿಸಿ, ಚಿಕ್ಕೋಡಿ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದವಿಲ್ಲ. ಈ ವಿಚಾರದಲ್ಲಿ ಸಂಧಾನ ಏನಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಉಮೇಶ್ ಕತ್ತಿ, ರಮೇಶ್ ಕತ್ತಿ ಸೇರಿ ಚಿಕ್ಕೋಡಿ ಕ್ಷೇತ್ರ ಗೆಲುವಿಗೆ ಪ್ರಯತ್ನಿಸುತ್ತಾರೆ. ಇಂದು ಅವರಿಬ್ಬರನ್ನು ಬಿಜೆಪಿ ನಾಯಕರು ಭೇಟಿಯಾಗಲಿದ್ದೇವೆ ಎಂದರು. ಕೆಎಲ್‍ಇ ಗೆಸ್ಟ್ ಹೌಸ್‍ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬಿಜೆಪಿ ಸಭೆ ನಡೆಯಲಿದೆ.

ರಾಹುಲ್ ಗಾಂಧಿ ಬಚ್ಚಾ:
ಬಳಿಕ ಡೈರಿ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಜೆಂಟಲ್‍ಮ್ಯಾನ್ ಅಂದುಕೊಂಡಿದ್ದೆ. ಆದ್ರೆ ಅವರೊಬ್ಬ ಬೇಜವಾಬ್ದಾರಿ ಮನುಷ್ಯ. ನಾನು ಡೈರಿಯಲ್ಲಿ ಎಲ್.ಕೆ ಅಡ್ವಾಣಿ ಹಣ ಕೊಟ್ಟಿದ್ದೇನೆ ಎಂದು ಬರೆದಿದ್ದನಂತೆ. ಈ ಬಗ್ಗೆ ಅವರು ಸಾಕ್ಷಿ ನೀಡಿ ನಿರೂಪಿಸಲಿ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ಹಾಗೆಯೇ ಕಾಂಗ್ರೆಸ್ ಅಧ್ಯಕ್ಷರಿಗೆ ಅಪಪ್ರಚಾರ ಶೋಭೆ ತರಲ್ಲ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಬಚ್ಚಾ ಅವರ ಮಾತಿಗೆ ಕಿಮ್ಮತ್ತಿಲ್ಲ. ಮೋದಿ ಅವರು ಈಗಲೂ ಪ್ರಧಾನಿ, ಮುಂದೆ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ 300ಕ್ಕೂ ಅಧಿಕ ಸೀಟು ಗೆದ್ದು ಮತ್ತೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *