ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಗೇಮ್ – ಹೈಕಮಾಂಡ್ ಮುಂದೆ 2 ದಿನ, 2 ಭೇಟಿ, 2 ಖಡಕ್ ಷರತ್ತು!

3 Min Read

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಡಿ.ಕೆ. ಸುರೇಶ್ (DK Suresh) ಅವರು ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್‌ಗೆ 2 ಖಡಕ್‌ ಷರತ್ತು ವಿಧಿಸಿ ಡೆಡ್‌ಲೈನ್ ನೀಡಿದ್ದಾರೆ.

- Advertisement -

ದೆಹಲಿಗೆ ಕಾಲಿಟ್ಟ ದಿನವೇ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದ ಡಿಕೆ ಸಹೋದರರು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬೆನ್ನಲ್ಲೇ ಹೈಕಮಾಂಡ್ ಮುಂದೆ ಡಿಕೆಶಿ ಎರಡು ಪ್ರಮುಖ ಷರತ್ತುಗಳನ್ನು ಇಟ್ಟಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

- Advertisement -

ಷರತ್ತು 1: ಬಫರ್ ಡೇಸ್ ಮತ್ತು ಬ್ರೀತಿಂಗ್ ಡೇಸ್ ಲೆಕ್ಕಾಚಾರ!
ಏಪ್ರಿಲ್ 29 ರಿಂದ ಮೇ 4: ಈ ಅವಧಿಯನ್ನು ‘ಬಫರ್ ಡೇಸ್’ ಎಂದು ಪರಿಗಣಿಸಿ ಸಿಎಂ ಅವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಬೇಕು.
ಮೇ 4 ರಿಂದ ಮೇ 10: ಈ ‘ಬ್ರೀತಿಂಗ್ ಡೇಸ್’ ಒಳಗಾಗಿ ಎಲ್ಲ ಗೊಂದಲಗಳಿಗೂ ತೆರೆ ಎಳೆದು, ಹೈಕಮಾಂಡ್ ತನ್ನ ಅಂತಿಮ ನಿರ್ಧಾರವನ್ನು ಘೋಷಿಸಬೇಕು.

- Advertisement -

ಷರತ್ತು 2: ನನ್ನ ತಾಳ್ಮೆ ಪರೀಕ್ಷಿಸಬೇಡಿ
“ಮೊದಲು ಹೇಳಿದ್ದು 2.5 ವರ್ಷ. ಈಗ 3 ವರ್ಷ ಆಗುತ್ತಿದೆ. ನಮ್ಮ ಪಕ್ಷನಿಷ್ಠೆಯನ್ನು ಇನ್ನು ಪರೀಕ್ಷೆ ಮಾಡುವುದಾದರೆ ಮಾಡಿ, ನಮ್ಮಿಂದ ಪಕ್ಷ ವಿರೋಧಿ ನಡೆಯಂತೂ ಖಂಡಿತ ಇಲ್ಲ. ಆದರೆ ಮೇ 10 ರೊಳಗೆ ಏನು ಎಂಬುದನ್ನು ನೀವೇ ಬಹಿರಂಗಪಡಿಸಿಬಿಡಿ” ಎಂದು ಡಿಕೆಶಿ ಖಡಕ್ ಆಗಿ ನುಡಿದಿದ್ದಾರೆ ಎನ್ನಲಾಗಿದೆ.

- Advertisement -

ಒಂದು ವೇಳೆ ಈ ಗಡುವಿನೊಳಗೆ ನಿರ್ಧಾರ ಹೊರಬೀಳದೆ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡರೆ ಅಥವಾ ಗೊಂದಲ ಉಂಟಾದರೆ ಅದಕ್ಕೆ ನನ್ನನ್ನು ಜವಾಬ್ದಾರಿಯನ್ನಾಗಿ ಮಾಡಬೇಡಿ ಎಂದು ಡಿಸಿಎಂ ಹೈಕಮಾಂಡ್ ನಾಯಕರಿಗೆ ನೇರವಾಗಿಯೇ ಎಚ್ಚರಿಸಿದ್ದಾರೆ. “ನಾನಂತೂ ಪಕ್ಷದ ವಿರುದ್ಧ ಹೋಗಲ್ಲ, ಆದರೆ ಶಾಸಕರ ನಡೆಗೆ ಗ್ಯಾರಂಟಿ ಇಲ್ಲ” ಎಂಬ ಅವರ ಮಾತು ಈಗ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

 

 

ಹೈಕಮಾಂಡ್ ಹೇಳಿದ್ದೇನು?
“ಹೈಕಮಾಂಡ್ ಮನಸ್ಸಿನಲ್ಲೂ ಕೆಲವು ವಿಚಾರಗಳಿವೆ, ಖಂಡಿತವಾಗಿಯೂ ನಿಮ್ಮನ್ನು ಕರೆದು ಮಾತನಾಡುತ್ತೇವೆ” ಎಂದು ನಾಯಕರು ಭರವಸೆ ನೀಡಿದ್ದಾರೆ. ಏಪ್ರಿಲ್ 28ರಂದು ರಾಹುಲ್ ಗಾಂಧಿ (Rahul Gandhi) ದೆಹಲಿಗೆ ಮರಳಲಿದ್ದು, ಏಪ್ರಿಲ್ 29ರಂದು ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ಅವರೊಂದಿಗೆ ಚರ್ಚಿಸಿ ಸಮಯ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.

ಏಪ್ರಿಲ್ 29 ರಿಂದ ಮೇ 4 ರ ಅವಧಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ರಾಜ್ಯದ ನಾಯಕತ್ವ ಅಥವಾ ಇತರ ಪ್ರಮುಖ ವಿಚಾರಗಳ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ಹೈಕಮಾಂಡ್ ಹೇಳಿದೆ.

ಮೇ 29 ರ ನಂತರ ದೆಹಲಿಗೆ ಬರುವಂತೆ ಡಿ.ಕೆ. ಬ್ರದರ್ಸ್‌ಗೆ ಸೂಚಿಸಲಾಗಿದೆ. ಅದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ದೆಹಲಿಗೆ ಕರೆಸುವ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ನಾಯಕರು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ದೆಹಲಿ ಅಂಗಳದಲ್ಲಿ ಡಿ.ಕೆ. ಬ್ರದರ್ಸ್ ನಡೆಸುತ್ತಿರುವ ಈ ‘ಪವರ್ ಪ್ಲೇ’ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬ ಈಗ ಕುತೂಹಲ ಹೆಚ್ಚಾಗಿದೆ.

ಅಂಡಮಾನ್‌ಗೆ ರಾಹುಲ್‌:
ನಾಳೆಯಿಂದ (ಏಪ್ರಿಲ್ 26) ರಾಹುಲ್ ಗಾಂಧಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೂರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಅಲ್ಲಿನ ಬುಡಕಟ್ಟು ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಹಾಗೂ ಕೇಂದ್ರ ಸರ್ಕಾರದ ‘ಗ್ರೇಟ್ ನಿಕೋಬಾರ್ ಯೋಜನೆ’ಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಲಿದ್ದಾರೆ. ಅಂಡಮಾನ್ ಪ್ರವಾಸ ಮುಗಿಸಿ ಏಪ್ರಿಲ್ 28 ರಂದು ಅವರು ಮರಳಿ ದೆಹಲಿಗೆ ಬರಲಿದ್ದಾರೆ.

Share This Article