ದೋಸ್ತಿಗಳ ನಡುವೆ ಜಂಗಿ ಕುಸ್ತಿ – ಬಳ್ಳಾರಿ ಅಖಾಡ ಹೇಗಿದೆ?

Public TV
4 Min Read

ಬಳ್ಳಾರಿ: ಒಂದು ಕಾಲದಲ್ಲಿ ಒಬ್ಬನೇ ನಾಯಕನಿಂದ ರಾಜಕೀಯ ನಲೆ ಕಂಡು ಕೊಂಡ ಇಬ್ಬರು ನಾಯಕರು ಈ ಬಾರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಿ (Election) ಬೇರೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಶ್ರೀರಾಮುಲು (B.Sriramulu) ಹಾಗೂ ನಾಗೇಂದ್ರ (Nagendra) ಒಂದು ಕಾಲದಲ್ಲಿ ಆಪ್ತ ಗೆಳೆಯರು. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೊಳ್ಳಲು ಈ ಇಬ್ಬರು ಸೇರಿ ಕೆಲಸ ಮಾಡಿದವರು. ಮಾಜಿ ಸಚಿವ ಜನಾರ್ದನ ರೆಡ್ಡಿ ಗರಡಿಯಲ್ಲಿಯೇ ಇಬ್ಬರೂ ಪಳಗಿದವರು. 2008ರಲ್ಲಿ ಕೂಡ್ಲಿಗಿಯಲ್ಲಿ (Kudligi) ಬಿಜೆಪಿಯಿಂದ ಸ್ಪರ್ಧಿಸಿ ನಾಗೇಂದ್ರ ಗೆಲುವು ಪಡೆದಿದ್ದರು. 2013ರಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಗೇಂದ್ರ ಗೆದ್ದರು. ಮತ್ತೆ 2018ರಲ್ಲಿ ಬಳ್ಳಾರಿ (Bellary) ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ‘ಕೈ’ ಬಂಡಾಯ ಶಮನ – ಗಂಗಾಂಬಿಕೆ ನಾಮಪತ್ರ ವಾಪಸ್‌

2008ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ಎಸ್‍ಟಿ ಮೀಸಲು ಕ್ಷೇತ್ರ ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಚುನಾವಣೆಗಳನ್ನು ಎದುರಿಸಿದ ಕ್ಷೇತ್ರವಾಗಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 2008ರಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದ್ದ ಬಿ.ಶ್ರೀರಾಮುಲು, 2011ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನದಿಂದ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ 2011ರಲ್ಲಿ ನಡೆದ ಉಪಚುನಾವಣೆ, 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಎರಡರಲ್ಲೂ ಶ್ರೀರಾಮುಲು ಬಿಎಸ್‍ಆರ್ ಪಕ್ಷದಿಂದ ಸ್ಪರ್ಧಿಸಿ ಮರು ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ವಾಪಸ್ ಬಂದು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ತೆರವಾದ ಶಾಸಕ ಸ್ಥಾನಕ್ಕೆ 2014ರಲ್ಲಿ ಪುನಃ ಉಪಚುನಾವಣೆ ನಡೆದು ಕಾಂಗ್ರೆಸ್‍ನ ಎನ್.ವೈ.ಗೋಪಾಲಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಕೂಡ್ಲಿಗಿಯಿಂದ ಗ್ರಾಮೀಣ ಕ್ಷೇತ್ರಕ್ಕೆ ವಲಸೆ ಬಂದ ಬಿ.ನಾಗೇಂದ್ರ ಕಾಂಗ್ರೆಸ್‍ನಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ.

ಒಂದು ಕಾಲದ ದೋಸ್ತಿಗಳು ಇಂದು ಒಂದೇ ಕ್ಷೇತ್ರದ ಅಧಿಪತ್ಯಕ್ಕೆ ಇಂದು ಗುದ್ದಾಟ ನಡೆಸಿದ್ದಾರೆ. ಈ ಮೂಲಕ ಇಬ್ಬರು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿ ಗೆಲ್ಲಲೇ ಬೇಕು ಎನ್ನುವ ಹಟಕ್ಕೆ ಬಿದ್ದಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈಗ ಹಾಲಿ ಸಚಿವ ಶ್ರೀರಾಮುಲು ಹಾಗೂ ಹಾಲಿ ಶಾಸಕ ನಾಗೇಂದ್ರ ನಡುವೆ ನೇರಾ ನೇರಾ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರು ಒಂದೇ ಸಮುದಾಯದ ನಾಯಕರು ಮೇಲಾಗಿ ಒಬ್ಬನೇ ನಾಯಕನಿಂದ ರಾಜಕೀಯ ಜೀವನ ಕಂಡುಕೊಂಡವರು.

ಮೇಲ್ನೋಟಕ್ಕೆ ಇಬ್ಬರೂ ಸಮಬಲ ಹೊಂದಿದ್ದಾರೆ. ಕಳೆದ ಐದು ವರ್ಷದಲ್ಲಿ ಹಾಲಿ ಶಾಸಕ ನಾಗೇಂದ್ರ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಮೇಲಾಗಿ ಗ್ರಾಮೀಣ ಕ್ಷೇತ್ರ ಗಡಿ ಭಾಗ ಆಂಧ್ರಪ್ರದೇಶದ ಜೊತೆ ಹಂಚಿಕೆ ಮಾಡಿಕೊಂಡಿದೆ. ಇದೇ ಕಾರಣದಿಂದ ಪಕ್ಕದ ಜಿಲ್ಲೆಯಲ್ಲಿ ನಾಗೇಂದ್ರ ಅವರ ಸಹೋದರ ಮಂತ್ರಿಯಾಗಿದ್ದಾರೆ. ಹೀಗಾಗಿ ಅವರಿಗೆ ಇದು ದೊಡ್ಡ ಶಕ್ತಿಯಾಗಿದೆ. ಇನ್ನು ಬಳ್ಳಾರಿ ನಗರದ ಟಿಕೆಟ್ ನಾರಾ ಭರತ್ ರೆಡ್ಡಿಗೆ ಸಿಕ್ಕಿದೆ. ಇದರಿಂದಾಗಿ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಅವರ ಬೆಂಬಲ ಕೂಡಾ ದೊರೆಯಲಿದೆ. ರೆಡ್ಡಿ ಬಳಗ ಬಿಟ್ಟ ಬಳಿಕ ಜಿಲ್ಲೆಯ ಮತ್ತೊಬ್ಬ ಪ್ರಭಾವಿತ ರೆಡ್ಡಿ ಕುಟುಂಬ ಎಂದರೆ ಅದು ಸೂರ್ಯ ನಾರಾಯಣ ರೆಡ್ಡಿ ಅವರು ಕುಟುಂಬ. ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮೀಣ ಹಾಗೂ ಪಕ್ಕದ ಕಂಪ್ಲಿ ಕ್ಷೇತ್ರದಲ್ಲಿ ಸೂರ್ಯನಾರಾಯಣ ರೆಡ್ಡಿ ಹಿಡಿತ ಹೊಂದಿದ್ದಾರೆ. ಇತ್ತ ಸಚಿವ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಮತ್ತೆ ತವರು ಜಿಲ್ಲೆಗೆ ಬಂದು ರಾಜಕಾರಣ ಆರಂಭ ಮಾಡಿದ್ದಾರೆ.

ಎಸ್‍ಟಿ ಮೀಸಲಾತಿ ನೀಡಿರುವುದು ಗ್ರಾಮೀಣ ಕ್ಷೇತ್ರದ ಚುನಾವಣೆಗೆ ಅಸ್ತ್ರವಾಗಲಿದೆ. ಅಲ್ಲದೇ ಸುಮಾರು 60 ಸಾವಿರ ಮುಸ್ಲಿಂ ಮತದಾರರು, ಹಾಗೂ 15 ಸಾವಿರ ಕ್ರಿಶ್ಚಿಯನ್ ಮತದಾರರು ಹೊಂದಿರುವ ಕ್ಷೇತ್ರದಲ್ಲಿ ಇವರೇ ನಿರ್ಣಾಯಕ ಮತದಾರು. ಅದಕ್ಕಾಗಿಯೇ ಮುಸ್ಲಿಂ ಮತದಾರರನ್ನು ಸೆಳೆಯಲು ಶ್ರೀರಾಮುಲು ಸರ್ಕಸ್ ಮಾಡುತಿದ್ದಾರೆ.

ಕಳೆದ ಐದು ವರ್ಷಗಳಿಂದ ಕ್ಷೇತ್ರ ಹಾಗೂ ಜಿಲ್ಲೆಯ ರಾಜಕೀಯದಿಂದ ದೂರ ಇರುವ ಶ್ರೀರಾಮುಲು ಅವರಿಗೆ ಗ್ರಾಮೀಣ ಕ್ಷೇತ್ರ ಗೆಲ್ಲುವುದು ಅಷ್ಟ ಸುಲಭವಿಲ್ಲ. ತಮ್ಮ ಎಲ್ಲಾ ರಾಜಕೀಯ ಅಸ್ತ್ರಗಳನ್ನು ಪ್ರಯೋಗ ಮಾಡಲೇಬೇಕು. ಯಾಕೆಂದರೆ ನಾಗೇಂದ್ರ ಅವರಿಗೆ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತವಿದೆ.

ಕ್ಷೇತ್ರದಲ್ಲಿ ಬಿಜೆಪಿಗೆ ವರದಾನ ಆಗಬಹುದಾದ ಅಂಶಗಳನ್ನು ನೋಡುವುದಾದರೆ, ಬಳ್ಳಾರಿ ಜಿಲ್ಲಾ ರಾಜಕಾರಣಕ್ಕೆ ಮತ್ತೆ ಶ್ರೀರಾಮಲು ಬಂದಿರುವುದು ಜಿಲ್ಲಾ ರಾಜಕೀಯದಲ್ಲಿ ಒಂದು ಶಕ್ತಿ ಬಂದ ಹಾಗೆ ಆಗಿದೆ. ಇನ್ನು ಎಸ್‍ಸಿ ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಶ್ರೀರಾಮುಲು ಅವರಿಗೆ ಅನುಕೂಲವಾಗಲಿದೆ. ಆದರೆ ಶ್ರೀರಾಮುಲು ಅವರಿಗೆ ಜಿಲ್ಲೆಯಲ್ಲಿ ಸಾಕಷ್ಟು ವಿರೋಧವಿದೆ. ಜಿಲ್ಲೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆದೆ. ಐದು ವರ್ಷಗಳಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಆಗದೇ ಇರುವುದು, ಜನರ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ ಅವ್ಯವಸ್ಥೆಗೆ ಜನರು ರೋಸಿ ಹೋಗಿದ್ದಾರೆ. ರೆಡ್ಡಿ ಹಾಗೂ ರಾಮುಲು ನಡುವಿನ ಒಳ ಜಗಳ ಪರೋಕ್ಷವಾಗಿ ನಾಗೇಂದ್ರ ಅವರಿಗೆ ಅನುಕೂಲವಾಲಿದೆ. ಇದು ಕಾಂಗ್ರೆಸ್‍ಗೆ ಒಂದು ವರವಾಗಲಿದೆ.

ನಾಗೇಂದ್ರ ಅವರು ಕೂಡ ರಾಮುಲು ಅವರಿಗೆ ಠಕ್ಕರ್ ಕೊಡಲು ತಯಾರಾಗಿದ್ದಾರೆ. ಹಣ ಬಲ, ತೋಳ್ಬಲದಲ್ಲಿ ಶಾಸಕ ನಾಗೇಂದ್ರ ಶ್ರೀರಾಮುಲು ಅವರಿಗೆ ನೇರ ಸ್ಪರ್ಧಿ. ಕಾಂಗ್ರೆಸ್ ನಗರ ಟಿಕೆಟ್‍ನ್ನು ಭರತ್ ರೆಡ್ಡಿ ಅವರಿಗೆ ನೀಡಿದ್ದು, ಗ್ರಾಮೀಣ ಕ್ಷೇತ್ರದ ಮೇಲೆ ಪ್ರಭಾವ ಬೀರಲಿದೆ. ಸೂರ್ಯನಾರಾಯಣ ರೆಡ್ಡಿ ಗ್ರಾಮೀಣ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ. ಮುಸಲ್ಮಾನ ಮತಗಳ ಕಾಂಗ್ರೆಸ್ ಪರವಾಗಿದ್ದು, ಕಾಂಗ್ರೆಸ್ ಗೆಲುವಿನ ದೊಡ್ಡ ಶಕ್ತಿ ಮುಸ್ಲಿಂ ಮತದಾರರಾಗಿದ್ದಾರೆ. ಆದರೆ ಕೊನೆಯ ಹಂತದಲ್ಲಿ ಯಾರ ಪರವಾಗಿ ಮತದಾರರು ಒಲವು ತೊರುತ್ತಾರೆಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಜೆಡಿಎಸ್‌ಗೆ ಶಾಕ್‌ – ʼಕೈʼ ಅಭ್ಯರ್ಥಿಗೆ ವೋಟ್‌ ಹಾಕಿ ಎಂದ MLC ಭೋಜೇಗೌಡ

Share This Article