ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Public TV
2 Min Read

ಬೆಂಗಳೂರು: ಲಿಂಗಾಯತರೆಲ್ಲಾ (Lingayat) ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ. ಅದೆಲ್ಲಾ ಬಿಜೆಪಿ (BJP) ಸೃಷ್ಟಿಸಿದ ಸುಳ್ಳುಗಳಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟ್ವೀಟ್ (Tweet) ಮುಖಾಂತರ ಸ್ಪಷ್ಟನೆ ನೀಡಿದ್ದಾರೆ.

ಲಿಂಗಾಯತರಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಎಲ್ಲೆಡೆ ಹರಿದಾಡುತ್ತಿದ್ದಂತೆ ಸ್ವತಃ ಸಿದ್ದರಾಮಯ್ಯನವರೇ ಸರಣಿ ಟ್ವೀಟ್‌ಗಳನ್ನು ಮಾಡಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಆರೋಪ

ಟ್ವೀಟ್‌ನಲ್ಲಿ ಏನಿದೆ?
ಬಿಜೆಪಿಯವರು ನನ್ನ ಹೇಳಿಕೆಯ ವೀಡಿಯೋವನ್ನು ಕಟ್ ಮಾಡಿ ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಲಿಂಗಾಯತರೆಲ್ಲಾ ಭ್ರಷ್ಟರೆಂದು ಹೇಳಿದ್ದೇನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಲಾಭ ಪಡೆಯುವ ಬಿಜೆಪಿಯ ಇಂತಹ ಷಡ್ಯಂತ್ರಗಳಿಗೆ ನಾಡಿನ ಲಿಂಗಾಯತ ಸಮುದಾಯ ಕಿವಿಗೊಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು. ಇದನ್ನೂ ಓದಿ: ರಮ್ಯಾರನ್ನು ಬಿಜೆಪಿಗೆ ಕರೆಯುವಷ್ಟು ಬರಗೆಟ್ಟಿಲ್ಲ: ಅಶೋಕ್ 

ಅಲ್ಲದೇ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಬೊಮ್ಮಾಯಿ  ಅವರೊಬ್ಬ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಿಲ್ಲ. ವೀರೇಂದ್ರ ಪಾಟೀಲ್‌ರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲ್‌ರು, ಬಿ.ಡಿ.ಜತ್ತಿ, ಎಸ್.ಆರ್ ಕಂಠಿಯಂತಹ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ಈ ನಾಡಿಗೆ ನೀಡಿದೆ. ಈ ಎಲ್ಲಾ ನಾಯಕರ ಬಗೆಗೆ ನನಗೆ ವಿಶೇಷ ಪ್ರೀತಿ ಹಾಗೂ ಅಭಿಮಾನವಿದೆ ಎಂದರು. ಇದನ್ನೂ ಓದಿ: ಇಂದು ಕೂಡಲಸಂಗಮಕ್ಕೆ ರಾಹುಲ್ ಗಾಂಧಿ – ಬಸವ ಜಯಂತಿಯಲ್ಲಿ ‘ಕೈ’ ನಾಯಕರು ಭಾಗಿ 

ವೀರಶೈವ-ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೆಟ್ ಅನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52-53 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದೇವೆ. ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನ ಮಾಡುವುದಿಲ್ಲ. ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡು ಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ಅದು ಅವರ ಪಕ್ಷದ ವಿಚಾರ. ಅದಕ್ಕೆ ನಮ್ಮ ತಕರಾರಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ

Share This Article